ಮಂಗಳವಾರ, ಜುಲೈ 23, 2019

ಶ್ಯಾಮತ್ತೆಯ ನೈಟಿ


ತಮ್ಮ ದೇಹದ ಮೂಳೆಗಳನ್ನು ಸವೆಯಿಸುವ ರಕ್ಕಸ ತನ್ನೊಳಗನ್ನು ವ್ಯಾಪಿಸಿದ್ದಾನೆ ಎಂದು ತಿಳಿದಾಗ ನಮ್ಮ ಶ್ಯಾಮತ್ತೆ ದೈಹಿಕವಾಗಿ ಕಂಗಾಲಾದರು. ಆದರೇನಂತೆ? ಅವರ ಮನಸ್ಸಿನ ದೃಢತೆಗೆ ಅವರೇ ಸಾಟಿ. ಆಸ್ಟಿಯೋಪೋರೋಸಿಸ್ ಅಲ್ಲ, ಅದರ ಅಜ್ಜನೆೇ ಬಂದರೂ ತನ್ನನ್ನೇನು ಮಾಡೀತು ಎಂಬಂತೆ ಮಕ್ಕಳು ಸೊಸೆಯಂದಿರು ಬೇಡ.., ಬೇಡ ಎಂದರೂ ಕೇಳದೆ ಆ ದೊಡ್ಡ ಮನೆಯ ಉದ್ದಕ್ಕೂ ಎಂದಿನಂತೆ ಓಡಾಡಿ ಕೆಲಸವನ್ನು ಹಚ್ಚಿಕೊಳ್ಳುತ್ತಿದ್ದರು . ಗ್ರೈಂಡರಿನಲ್ಲಿ ಸುತ್ತುತ್ತಿರುವ ಹಿಟ್ಟಿನ ಹದವನ್ನು ಅವರುನೋಡದಿದ್ದರೆ ದೋಸೆ ಸರಿಯಾಗುವುದು ಹೇಗೆ? ಹತ್ತೋ ಹನ್ನೆರಡೋ ಆಳುಕಾಳುಗಳ ಕಾಫಿ, ತಿಂಡಿ, ಊಟ ಇತ್ಯಾದಿಗಳ ಉಸ್ತುವಾರಿ ನೋಡದಿದ್ದರೆ ಮನೆ ನಡೆಯುವುದಾದರೂ ಹೇಗೆ? ಚಕ್ಕುಲಿ, ಹಪ್ಪಳ, ಉಪ್ಪಿನಕಾಯಿಗಳಂತೂ ಅವರು ಕೈಯಾಡಿಸದಿದ್ದರೆ ಅವು ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬಂತಾಗುವುದೇ ಸೈ(ಹಾಗೆಂದು ಅವರ ಬಲವಾದ ನಂಬಿಕೆ). ವಿಪರೀತ ಕಾಲುನೋವು, ಸೊಂಟನೋವು ಬಂದಾಗ ಒಂದಷ್ಟು ಹೊತ್ತು ಕುಳಿತುಕೊಳ್ಳುವರು. ಮತ್ತೆ ಯಥಾಪ್ರಕಾರ ಕೆಲಸದ ಯಂತ್ರ. ಬೆಳ್ಳಂಬೆಳಗ್ಗೆ ಎದ್ದು ತಾವು ಉಟ್ಟ ಕಾಸರಗೋಡು ಹ್ಯಾಂಡ್ಲೂಮ್ ಸೀರೆಯ ನಿರಿಗೆಯನ್ನು ಎತ್ತಿ ಸೆರಗನ್ನು ಸೊಂಟಕ್ಕೆ ಸುತ್ತಿ ಕಟ್ಟಿಕೊಂಡರೆಂದರೆ ಮತ್ತವುಗಳು ಕೆಳಗಿಳಿಯುವುದು ರಾತ್ರಿ ಮಲಗುವಾಗಲೇ. ಇಂತಹ ಶ್ಯಾಮತ್ತೆ ಇತ್ತೀಚೆಗೆ ಕಡ್ಡಾಯವಾಗಿ ಕುರ್ಚಿ ಗೆ  ಅಂಟಿಕೊಳ್ಳಬೇಕಾಗಿ ಬಂತು. ಸಿ.ಟಿ.ಸ್ಕ್ಯಾನ್, ಎಮ್,ಆರ್, ಐ. ಎಲ್ಲವೂ ಮೊದಲೇ ಆಗಿತ್ತಲ್ಲ?ಶ್ಯಾಮತ್ತೆ ಬಿದ್ದು ಗಿದ್ದು ಹೋದರೆ ಮಲ್ಟಿಪಲ್ ಫ್ರಾಕ್ಚರ್ ಆಗುವ ಸಾಧ್ಯತೆ ಬಹಳ ಇದೆಯೆಂದು ಎರಡು ವರ್ಷ ಹಿಂದೆಯೇ  ತಜ್ಞ ವೈದ್ಯರು ಎಚ್ಚರಿಸಿದ್ದರು. ವಾಕರ್ ಇದ್ದರೂ ಅದು ಸೋಫಾದ ಬೆನ್ನಿಗೆ ಆಧಾರವಾಗಿಯೋ ಮೇಜಿನ ಕಾಲಿಗೆ ಜೊತೆಯಾಗಿಯೋ ಇರುವುದೇ ಹೆಚ್ಚು. ಹಾಗೆ ಒಂದು ದಿನ ಅವರು ಏನೋ ಕೆಲಸದ ನೆನಪಾಗಿ ಲಟ್ಟೆಂದು ಎದ್ದು ಅಡುಗೆ ಕೋಣೆಯ ಕಡೆಗೆ ಹೆಜ್ಜೆ ಹಾಕಿದರು. ಧಡಾರ್ ಎಂದು ಬಿದ್ದು ಬಿಟ್ಟರು. ಮಕ್ಕಳು ಕೂಡಲೇ ಅಮ್ಮನನ್ನು ಆಸ್ಪತ್ರೆಗೆ ಸಾಗಿಸಿದರು. ಶ್ಯಾಮತ್ತೆಯ ಧರ್ಮಕರ್ಮಗಳೇ ಅವರನ್ನು ಕಾಯ್ದದ್ದಿರಬೇಕು. ಫ್ರಾಕ್ಚರ್ ಆಗಿರಲಿಲ್ಲ. ಆದರೆ ನೆಲಕ್ಕೆ ಬಡಿದ ದೇಹದ ಭಾಗ ನೀಲಿಗಟ್ಟಿ ಹೋಯ್ತು. ವಿಪರೀತ ನೋವು ತಿನ್ನಬೇಕಾಗಿ ಬಂತು. ಕಾಲು ಅಲ್ಲಾಡಿಸಲೂ ಸಾಧ್ಯವಿಲ್ಲದಂತಾಯ್ತು. ದಿನನಿತ್ಯದ ಔಷಧಿ, ಮಾತ್ರೆಗಳ ಜೊತೆಗೆ ಮತ್ತೊಂದಷ್ಟು ಸೇರ್ಪಡೆಯಾಯ್ತು. ನಡೆಯುವಾಗ ಕಾಲಿಗೆ ಸೀರೆ ತೊಡರಿದಂತಾಗಿ ಬಿದ್ದುಬಿಟ್ಟೆ ಎಂದು ಅವರೇ ನಂತರದ ದಿನಗಳಲ್ಲಿ ಸೊಸೆಯೊಂದಿಗೆ ಹೇಳಿಕೊಂಡಿದ್ದರಂತೆ. ಒಂದು ದಿನ ಅತ್ತೆಯ ಮೂಡು ಚೆನ್ನಾಗಿರುವ ಹೊತ್ತು ನೋಡಿ ಸೊಸೆ ದೊಡ್ಡ ಬೆಣ್ಣೆ ಮುದ್ದೆಯನ್ನುತಯಾರುಮಾಡಿಕೊಂಡು  ಅವರೆದುರು ಹಾಜರಾದಳು.
"ಅತ್ತೇ..."
"ಏನಮ್ಮಾ..."
"ಮತ್ತೇನೂ ಇಲ್ಲಾ....,ಅತ್ತೇ...ಮೊನ್ನೆ ನೀವು ಬಿದ್ದುಬಿಟ್ರಲ್ಲಾ...,ನಿನ್ನೆಯೂ ಅಷ್ಟೆ, ಸ್ನಾನದ ನಂತರ ಸೀರೆ ಉಡುವಾಗ ಜೋಲಿತಪ್ಪಿದ್ರಲ್ಲಾ....ಅದರ ಸೆರಗು ನಿರಿಗೆ ರವಿಕೆ ಎಲ್ಲವನ್ನೂ ಒಂದೊಂದಾಗಿ ಮಾಡಿಕೊಳ್ಳುವ ಹೊತ್ತಿಗೆ ನೀವು ಸುಸ್ತಾಗಿ  ಹೋಗ್ತಿರಲ್ಲ ....?
"ಹೂಂ...ಹೌದು...ತುಂಬ ಕಷ್ಟ ಆಗ್ತಿದೆ...."
ಸೊಸೆಗೆ ತನ್ನ ಕೈಯ್ಯಲ್ಲಿನ ಬೆಣ್ಣೆ ಕರಗುವ ಮೊದಲು ಕೆಲಸ ಮುಗಿಸಬೇಕಿತ್ತು.
"ಹೌದತ್ತೆ..., ನಾವು ರಾತ್ರಿ ನೈಟಿ ಹಾಕೋದೂ ಅದೇ ಉದ್ದೇಶಕ್ಕೇ, ನಿದ್ದೆ ಕಣ್ಣಲ್ಲಿ ಏಳುವಾಗ ಮೈಮೇಲಿನ ಬಟ್ಟೆಯ ಪರಿವೆ ಇರೋದಿಲ್ಲ, ಅದು ಸೀರೆಯಾಗಿದ್ದರಂತೂ ಪಜೀತಿ ಹೇಳೋದೇ ಬೇಡಾ..., ಬಿದ್ದು ಗಿದ್ದು ಆಗಿಬಿಟ್ರೇ..., ನಾವೇ ತಾನೇ ಅನುಭವಿಸ್ಬೇಕು? ನಮ್ಗೂ ಐವತ್ತೆಲ್ಲ ದಾಟಿತಲ್ವಾ...?"
"ಹೌದಮ್ಮ, ಪ್ರಾಯ ಆಗ್ತಾ ನಮ್ಮ ಎಚ್ಚರಿಕೆಯಲ್ಲಿ ನಾವು ಇರ್ಬೇಕು..."
"ಹೌದತ್ತೆ, ನಿಮ್ಮ ಅನುಭವ ನಮಗೆಲ್ಲಿದೆ? ಮೊದಲು ನೀವು ಚೆನ್ನಾಗಿರ್ಬೇಕು....,ಆ ಮೇಲೆ ನಮ್ಮದು..."
ಶ್ಯಾಮತ್ತೆಗೆ ಸೊಸೆಯ ಇಂಗಿತ ಅರ್ಥವಾಗದೆ ಆಕೆಯೆಡೆಗೆ ಪ್ರಶ್ನಾರ್ಥಕವಾಗಿ ನೋಡಿದರು.
"ಅತ್ತೇ....ನೀವೂ ನೈಟಿ ಹಾಕಿ ಒಂದು ಟ್ರಯಲ್ ನೋಡ್ತೀರಾ...?"
"ಏನು!? ನಾನು ಆ ಮಾನಗೆಟ್ಟ ಲಂಗ ಹಾಕೋದಾ...?"
ಸೊಸೆ ಉಗುಳುನುಂಗುತ್ತಾ ಹೇಳಿದಳು
"ಅಲ್ಲತ್ತೇ...ಈಗ ನಮ್ಗೆ ಹೇಗೆ ಬೇಕೋ ಹಾಗೆ ನೈಟಿ ಹೊಲಿದು ಕೊಡ್ತಾರೆ. ನೀವು ಹೇಗೆ ಹೇಳಿದ್ರೆ ಹಾಗೆ....ಬೇಡವೇ ಬೇಡ ಅನ್ನೋದಾದ್ರೆ ನಾನು ಒತ್ತಾಯ ಮಾಡೋದಿಲ್ಲ, ಮೊನ್ನೆ ನೀವು ಬಿದ್ದ ಲಾಗಾಯ್ತಿನಿಂದ ಪಡ್ತಿರೋ ಕಷ್ಟ ನೋಡಿ ಹೇಳಿದ್ದಷ್ಟೆ"
ಶ್ಯಾಮತ್ತೆ ಮೌನವಾದರು. ಊಟ, ತಿಂಡಿ, ಟಾಯ್ಲೆಟ್ಟು, ಬಾತ್ರೂಂ... ಹೀಗೆ ಎಲ್ಲದಕ್ಕೂ ಅವರಿಗೀಗ ಸೊಸೆಯ ಸಹಾಯ ಬೇಕೇ ಬೇಕಾಗಿತ್ತು. ಬೆಳಗ್ಗೆ ಸ್ನಾನ ಮುಗಿಸಿ ಸೀರೆ ಉಡುವ ಪ್ರಕ್ರಿಯೆಯೇ ಒಂದು ಯಜ್ಞ ಎನ್ನುವಷ್ಟು ಸಾಕಾಗಿ ಹೋಗುತ್ತಿತ್ತು. ಬವಳಿ ಬಂದಂತಾಗಿ ಮಂಚದಲ್ಲಿ ಕೂತೇ ಹೇಗೋ ಸೀರೆಯೊಂದನ್ನು ಸುತ್ತಿಸಿಕೊಂಡಿದ್ದರು. ಪರರಿಗೆ ಉಪಕಾರ ಮಾತ್ರ ಮಾಡಿ ಗೊತ್ತಿದ್ದ ಜೀವ. ಈಗ ಪರಾವಲಂಬಿಯಾಗಬೇಕಾಗಿ ಬಂದುದು ಬಹಳ ಕಿರಿಕಿರಿಯೆನಿಸಿತ್ತು. ಯಾವತ್ತಿಗೂ ಇನ್ನೊಬ್ಬರಿಗೆ ತೊಂದರೆ ಕೊಟ್ಟು ಗೊತ್ತಿಲ್ಲದ ಅವರಿಗೆ ಸೊಸೆ ಹೇಳಿದ ಮಾತುಗಳಲ್ಲಿಯೂ ಹುರುಳಿದೆ ಅನಿಸಿತ್ತು.
"ಹೂಂ...ಹೇಗೆ ಬದುಕಿದ್ದವಳು ನಾನು! ಈಗ ಆ ಗತಿಗೆಟ್ಟ ಲಂಗ ಹಾಕುವಲ್ಲಿಗೆ ಬಂತಲ್ಲಾ...? ಅಲ್ಲಾ....,ಈಗೀಗ ಮಾರ್ಕೆಟಿಗೆ  ಹೊಗುವಾಗಲೂ ಅದನ್ನು ಹಾಕ್ತಾರಂತೆ....ಮತ್ತಿನ್ನು ಮನೆಯೊಳಗೇ ಇರುವ ನನಗೇನಂತೆ...?" ತನ್ನಲ್ಲೇ ಎಂಬಂತೆ ಗೊಣಗಿಕೊಂಡರು.
ಸೊಸೆ ಬಹು ಜಾಗರೂಕತೆಯಿಂದ ಹೇಳಿದಳು.
"ಹೋ...ಪರ್ವಾಗಿಲ್ಲ ಅತ್ತೆ..., ನಿಮ್ಮ ಮನಸ್ಸಿಗೆ ಅದು ಒಗ್ಗುವುದಿಲ್ಲ ಅಂತ ತೋರಿದ್ರೆ ಬಿಟ್ಟು ಬಿಡೋಣ"
"ಹಾಗಲ್ಲಾ...ನನ್ನ ಕೆಲಸ ನನ್ಗೇ ಮಾಡಿಕೊಳ್ಳಲು ಆಗುವುದಿಲ್ಲವೆಂದ ಮೇಲೆ ಮನಸ್ಸನ್ನ ಒಗ್ಗಿಸಿಕೊಳ್ಳಲೇ ಬೇಕಲ್ಲ?"
"ಹಾಗಾದ್ರೆ ನೈಟಿ ಹೊಲಿಸೋದಾ...?"
ಶ್ಯಾಮತ್ತೆ ಮೌನವಾಗಿ ತಲೆಯಲ್ಲಾಡಿಸಿದರು. ಬೆಣ್ಣೆ ಹಚ್ಚಿದ್ದು ಕೆಲಸಕ್ಕೆ ಬಂತು ಎನ್ನುವ ಸಮಾಧಾನದ ಜೊತೆಗೆ ಇನ್ನೂ ಅಲ್ಲೇ ನಿಂತರೆ ಅತ್ತೆ ಮನಸ್ಸು ಬದಲಾಯಿಸಬಹುದು ಎಂಬ ಅಂಜಿಕೆಯೂ ಸೇರಿ ಒಂದು ಕ್ಷಣವೂ ವ್ಯರ್ಥಮಾಡದೆ ಕೂಡಲೇ ಟೈಲರನ್ನು ಬರ ಹೇಳಿದಳು. (ಸುಮಾರು ಆರು ತಿಂಗಳಿನಿಂದ ಮಕ್ಕಳು, ಸೊಸೆಯಂದಿರು ಶ್ಯಾಮತ್ತೆಯ ಮನವೊಲಿಸುವ ಪ್ರಯತ್ನದಲ್ಲಿ ವಿಫಲರಾಗಿದ್ದರು). ಅರ್ಧಗಂಟೆಯಲ್ಲಿ ಟೈಲರಮ್ಮ ಹಾಜರಾದಳು. ಆಕೆ ಅಳತೆ ಟೇಪು ಹಿಡಿದು ಅವರ ಮುಂದೆ ನಿಂತಾಗ ಸೊಸೆ ಅತ್ತೆಯ ಕೈಹಿಡಿದು ನಿಲ್ಲಿಸಿದಳು.
"ಏನಮ್ಮಾ ನಾನು ಹೇಳಿದ ಹಾಗೇ ಆ ಲಂಗವನ್ನು ಹೊಲಿದು ಕೊಡ್ತೀಯಾ?" ಶ್ಯಾಮತ್ತೆಯ ಪ್ರಶ್ನೆಗೆ ಆಕೆ ನಗು ಮುಖದಿಂದಲೇ ಉತ್ತರಿಸಿದಳು,
"ಓ..ಖಂಡಿತಾ..."
"ನೋಡೂ...ಆ ಲಂಗ ಕಾಲಿಗೆ ತೊಡರಿಕೊಳ್ಳದ ಹಾಗೆ ಹೊಲಿ. ಅದನ್ನ ಹಾಕ್ಕೊಂಡ್ರೆ ಸೆಖೆ ಆಗ್ಬಾರ್ದು.  ಎದೆಯ ಭಾಗ ಪೂರ್ತಿ ಮುಚ್ಚುವ ಹಾಗೆ ಒಂದು ಸೆರಗು ಇರಲಿ. ಅದು ಹೆಚ್ಚು ಉದ್ದ ಬೇಡ. ಕೈಉಜ್ಜಿಕೊಳ್ಳಲು ಸಿಗುವ ಹಾಗೆ ಇರಲಿ. ಸೊಂಟದಲ್ಲಿ ಟವೆಲು ಸಿಗಿಸುವ ವ್ಯವಸ್ತೆ ಮಾಡಮ್ಮಾ. ಇನ್ನೇನಾದ್ರೂ ಬೇಕಿದ್ರೆ ಮುಂದೆ ಸೊಸೆ ತಿಳಿಸ್ತಾಳೆ..." ಎನ್ನುತ್ತಾ ಸೊಸೆಯ ಮುಖ ನೋಡಿದರು.
"ಹೌದು. ಏನು ಮಾಡ್ಬೇಕು ಹೇಳಿ ಅತ್ತೆ, ಮುಂದಿನ ಕ್ಷಣದಲ್ಲಿ ಅದು ರೆಡಿಯಾಗಿ ಬಿಡ್ತದೆ."
ಟೈಲರಮ್ಮ ಹೋದ ನಂತರ ಶ್ಯಾಮತ್ತೆ ಗಂಭೀರವಾಗಿ ಯೋಚಿಸತೊಡಗಿದರು. ನೈಟಿಯಲ್ಲಿ ಬೇರೇನೂ ಬದಲಾವಣೆ ಬೇಡ ಎಂದು ತೋರಿತು. ಅದನ್ನೇ ಸೊಸೆಯ ಬಳಿ ಹೇಳಿದರು.
ಮಾರನೆಯ ದಿನವೇ ನೈಟಿ ಬಂತು.
"ಅತ್ತೇ...ಒಮ್ಮೆ ಟ್ರಯಲ್ ನೊಡೋದಾ..?" ನೈಟಿ ಕೈಯ್ಯಲ್ಲಿ ಹಿಡಿದು ಸೊಸೆ ಕೇಳಿದಾಗ ಶ್ಯಾಮತ್ತೆ ಉಗುಳು ನುಂಗಿಕೊಂಡರು. ಸುಮಾರು ಎಪ್ಪತ್ತು ವರ್ಷ ಸಂಗಾತಿಯಾಗಿದ್ದ ಸೀರೆಯನ್ನು ಬೀಳ್ಕೊಡುವ ಸಂದರ್ಭ ತಮ್ಮ ಜೀವನದಲ್ಲಿ ಬಂದೀತೆಂದು ಅವರು ಎಣಿಸಿರಲೇ ಇಲ್ಲ. ತುಂಬಿ ಬಂದ ಕಣ್ಣನ್ನು ಸೊಸೆಗೆ ಕಾಣದಂತೆ ಸೆರಗಿನಿಂದ ಉಜ್ಜಿಕೊಂಡರು(ಇನ್ನೆಲ್ಲಿ ಈ ಭಾಗ್ಯ ಎನಿಸಿತೆನೋ? ಸೆರಗನ್ನು ಆಪ್ಯಾಯತೆಯಿಂದ ನೇವರಿಸಿದರು). ಸಾವರಿಸಿಕೊಂಡು ಹೇಳಿದರು,
"ಅದನ್ನು ಮೊದೆಲು ಒಗೆದು ಹಾಕಿಬಿಡು, ಯಾರ್ಯಾರ ಕೈಯ್ಯಲ್ಲೋ ಮುಟ್ಟಿಸಿಕೊಂಡ ಅದನ್ನು ನಾನು ಹಾಕೋದಾ...?"
"ಸರಿ ಅತ್ತೆ"
ಬೀಸುವ ದೊಣ್ಣೆ ತಪ್ಪಿ ಹೋಯ್ತು ಎಂಬಂತೆ ಶ್ಯಾಮತ್ತೆ ನಿಡಿದಾಗಿ ಉಸಿರನ್ನೆಳೆದುಕೊಂಡರು.
ಮಾರನೆಯ ದಿನ ಶ್ಯಾಮತ್ತೆಯ ಸ್ನಾನ ಮುಗಿಯುತ್ತಲೂ ಸೊಸೆ ನೈಟಿಯೊಂದಿಗೆ ಹಾಜರ್! ಸೊಸೆಯ ನಗುಮುಖದೆದುರು ಶರಣಾಗದೆ ಬೇರೆ ದಾರಿಯಿರಲಿಲ್ಲ. ಹಾಗೆ ನೈಟಿ ಶ್ಯಾಮತ್ತೆಯನ್ನಲಂಕರಿಸಿತು. ತಾಯಿಯನ್ನು ತೊರೆದ ತಬ್ಬಲಿಯಂತಹ ಅವರ ಮುಖಭಾವವನ್ನು ನೋಡಿ ಸೊಸೆಗೆ ಅಯ್ಯೋ ಎನಿಸಿತು. ಆದರೇನು ಮಾಡೋಣ? ನಡೆಯುವಾಗ ಹೆಜ್ಜೆ ಹೆಜ್ಜೆಗೂ ಮುಗ್ಗುರಿಸುವ ಶ್ಯಾಮತ್ತೆಗೆ ಸೀರೆ ದೊಡ್ಡ ತೊಡಕೇ ಆಗಿತ್ತು.
ಸೆರಗಿರುವ ಹೊಸ ನಮೂನೆಯ ನೈಟಿ, ಕುರ್ತಾದ  ಮೇಲೆ ದುಪ್ಪಟ್ಟಾ ಇರುವ ಹಾಗೆ ಬಿಲ್ಟ್ ಇನ್ ದುಪ್ಪಟ್ಟಾವೊಂದು ನೈಟಿಯ ಭುಜದಿಂದ ಭುಜಕ್ಕೆ ಹೊಲಿಯಲ್ಪಟ್ಟಿತ್ತು. ಸೊಂಟದಲ್ಲೊಂದು ಪಟ್ಟಿ, ಅದರಲ್ಲಿ ಪ್ರತ್ಯೇಕ ಪ್ರತ್ಯೇಕ ಜೇಬುಗಳಂತಹ ರಚನೆಗಳು, ಒಂದು ಟವೆಲಿಗೆ, ಇನ್ನೊಂದು ಕನ್ನಡಕಕ್ಕೆ, ಮತ್ತೊಂದು ಗಂಟೆ ನೋಡಿಕೊಳ್ಳಲು ದೊಡ್ಡ ಸಂಖ್ಯೆಗಳಿರುವ ರಿಸ್ಟ್ ವಾಚ್ ಹಾಕಿಕೊಳ್ಳಲು . ಹೀಗೆ ಸರ್ವಾಲಂಕಾರಗೊಂಡ  ನೈಟಿ ಹಾಕಿದ ಶ್ಯಾಮತ್ತೆಯ ಫೋಟೋ ಕುಟುಂಬದ ವ್ಯಾಟ್ಸ್ಯಪ್ ಗ್ರೂಪಿನಲ್ಲಿ ಹರಿದಾಡಿತು.
 `ವಾವ್....ಅಜ್ಜಿ ಲುಕ್ಸ್ ಸೋ ಯಂಗ್...'
 `ಅಜ್ಜಿ ಲುಕ್ಸ್ ಲೈಕ್ ಆನ್ ಏಂಜಲ್..'
ಇತ್ಯಾದಿ ಮೆಚ್ಚುಗೆಗಳ ಮಹಾಪೂರವೇ ಹರಿದು ಬಂತು. ಒಬ್ಬ ಮೊಮ್ಮಗನಂತೂ,
 `ಅಜ್ಜಿಯ ಸೈಝ್ ಕಳಿಸಿ, ನಾನು ಯು.ಎಸ್.ಎ. ದಿಂದ ಬರೋವಾಗ ಲೇಟೆಸ್ಟ್ ಮಾಡೆಲ್ ನೈಟಿ ತರ್ತೇನೆ' ಅಂತ ಸಂಭ್ರಮಿಸಿದ.
 ಶ್ಯಾಮತ್ತೆಗೆ ಎಲ್ಲವನ್ನೂ ವಿವರಿಸಿ ಹೇಳಲಾಯಿತು. ಎಲ್ಲವನ್ನೂ ಆಲಿಸಿದ ಶ್ಯಾಮತ್ತೆ ಉಸಿರಿದ್ದು ಒಂದೇ ವಾಕ್ಯ,
"ಇದರ ಮೇಲೆ ಸೀರೆ ಉಟ್ಟುಕೊಂಡು ಪಟ(ಫೋಟೋ) ತೆಗೆಯಬಹುದಿತ್ತೇನೋ..."
ಸಂಜೆಯಾಯಿತು, ಸೊಸೆಗೆ ಬುಲಾವ್ ಹೊಯ್ತು. ಗಿಡಗಳಿಗೆ ನೀರು ಹಾಕುತ್ತಿದ್ದ ಸೊಸೆ ಓಡಿ ಬಂದಳು.
"ನೊಡಮ್ಮಾ ನನ್ನ ಕಾಲುಗಳಿಗೆ ಸೊಳ್ಳೆ ಕಚ್ತಾ ಇದೆ. ಸೀರೆ ಉಡ್ತಿರೊವಾಗ ಈ ಕಿರಿ ಕಿರಿ ಇರಲಿಲ್ಲ. ಕಾಲಿನ ಅಡಿಭಾಗಕ್ಕೆ ಸೀರೆಯನ್ನು ಎಳೆದುಕೊಳ್ಳಬಹುದಿತ್ತು...."
ಶ್ಯಾಮತ್ತೆಯ ಪೇಚಾಟ ನೋಡಿ ಸೊಸೆಗೆ ಮರುಕ ಹುಟ್ಟಿತು.
"ಅತ್ತೇ.., ಸೊಳ್ಳೆ ಕಚ್ಚದ ಹಾಗೆ ಒಡೊಮಸ್ ಹಚ್ಚಲಾ?"
"ಬೇಡಮ್ಮ, ಅದರ ವಾಸನೆ ಸಹಿಸಕ್ಕಾಗಲ್ಲ"
"ಸೊಳ್ಳೆ ಮ್ಯಾಟ್ ಉರಿತಾನೇ ಇದೆಯಲ್ಲಾ ಅತ್ತೇ...,ಇನ್ನೇನು ಮಾಡೋಣ?"
"ನೀನು ಆ ಟೈಲರಮ್ಮನ್ನ ನಾಳೆ ಬರ್ಲಿಕೆ ಹೇಳ್ತಿಯಾ?"
"ಈಗಲೇ ಹೇಳಿಬಿಡ್ತೇನೆ ಅತ್ತೆ."
ಅರ್ಧ ಗಂಟೆಯೊಳಗೆ ಟೈಲರಮ್ಮ ಹಾಜರಾದಳು.
"ನೋಡಮ್ಮಾ, ವಿಪರೀತ ಸೊಳ್ಳೆ ಕಚ್ತಾ ಇದೆ. ಈ ಲಂಗದ ಕೆಳಭಾಗಕ್ಕೆ ನನ್ನ ಹಳೆಯ ಸೀರೆಯನ್ನು ತುಂಡು ಮಾಡಿ ಸೇರಿಸಿ ಕೊಡ್ತಿಯಾ?"
ಸೊಸೆ ಎನೋ ಹೇಳಲು ಬಾಯಿ ತೆರೆದವಳು ಹಾಗೇ ನುಂಗಿಕೊಂಡಳು.
"ಸರಿಯಮ್ಮ, ನಾಳೆ ರೆಡಿ ಮಾಡಿ ತರ್ತೇನೆ."
ನೈಟಿ ಹೋದ ಸಂಭ್ರಮದಲ್ಲಿ ಶ್ಯಾಮತ್ತೆ ಪುನಃ ಸೀರೆಯೊಳಗೆ ಬಂಧಿಯಾದರು, ನಿಶ್ಚಿಂತೆಯಿಂದ ಕೂತು ಟಿ.ವಿ. ಸೀರಿಯಲ್ ನೋಡಿದರು.
ಮಾರನೆಯ ದಿನ ನೈಟಿ ಹೊಸ ಅವತಾರದಲ್ಲಿ ಶ್ಯಾಮತ್ತೆಯೆದುರು ಬಂದು ನಿಂತಿತು. ಮಲತಾಯಿಯನ್ನು ನೋಡುವಂತೆ ಅದರೆಡೆಗೆ ದೃಷ್ಟಿ ಹಾಯಿಸಿದರು. ನೈಟಿಯ ಕೆಳಭಾಗದ ಸುತ್ತಲೂ ಅಷ್ಟುದ್ದಕೆ ಸೀರೆಯ ತುಂಡು ಜೋತಾಡುತ್ತಿತ್ತು.
"ಅತ್ತೇ..., ಇದು ಕಾಲಿಗೆ ತೊಡರಿಕೊಳ್ಳಬಹುದಲ್ಲ?"
"ನಡೆಯುವಾಗ ಕೈಯ್ಯಲ್ಲಿ ಎತ್ತಿ ಹಿಡಿದರಾಯ್ತು ಬಿಡು" ಎಂದರು.
ಹಾಗಾದರೆ ವಾಕರ್ ಹಿಡಿಯೋದು ಹೇಗೆ? ಎನ್ನುವ ಪ್ರಶ್ನೆಯನ್ನು ಕೇಳಲಾರದೆ ಹೋದಳು ಸೊಸೆ.
ಪುನಃ ಶ್ಯಾಮತ್ತೆಯ ಹೊಸ ಅವತಾರ ಕುಟುಂಬದ ವಾಟ್ಸ್ಯಾಪ್  ಗ್ರೂಪಲ್ಲಿ ಹರಿದಾಡಿತು.
`ವಾವ್....,ಲೇಡಿ ಡಯಾನಾಳ ಗವನು ಇದ್ದಹಾಗಿದೆ. ಅಜ್ಜಿಯ ತಲೆಗೊಂದು ಕಿರೀಟ ಇಟ್ಟು ಫೊಟೋ ಕಳ್ಸಿ'
`ಅಯ್ಯೋ...,ಇದಕ್ಕಿಂತಲೂ ಸೊಳ್ಳೆ ಪರದೆಯ ತುಂಡುಗಳನ್ನು ಜೋಡಿಸಬಹುದಿತ್ತು...' ಇತ್ಯಾದಿಯಾಗಿ ಹೊಸ ಕಮೆಂಟುಗಳೂ ಹರಿದಾಡಿದುವು.
ಈ ಸಲ ಅದನ್ನು ಶ್ಯಾಮತ್ತೆಗೆ ಓದಿ ಹೇಳುವ ಧೈರ್ಯವನ್ನು ಯಾರೂ ಮಾಡಲಿಲ್ಲ.
ಮಾರನೆಯ ದಿನ ಧೋ... ಎಂದು ಮಳೆ ಸುರಿಯತೊಡಗಿತು. ಒಳಗೇನೋ ಕೆಲಸದಲ್ಲಿದ್ದ ಸೊಸೆಯನ್ನು ಶ್ಯಾಮತ್ತೆ ಕರೆದರು.
"ನೋಡಮ್ಮಾ..., ಈ ಲಂಗದೊಳಗೆ ರವಿಕೆಯ ವ್ಯವಸ್ತೆ ಇಲ್ವಲ್ಲಾ? ಹೊರಗಿನ ತಂಪು ಹವೆಗೆ ಮೈಯೆಲ್ಲ ತೆರೆದಿಟ್ಟ ಹಾಗೆ ಆಗ್ತಿದೆ"
"ಹೌದಾ ಅತ್ತೆ? ಹಾಗಾದರೆ ಒಂದು ಸ್ವೆಟರ್ ಕೊಡಲಾ?"
"ಥೂ...ಅದೆಲ್ಲ ಬೇಡ, ಉಸಿರು ಕಟ್ಟಿ ಹೊದೀತು. ನನ್ನ ರವಿಕೆಯನ್ನೇ ಇದರೊಳಗಡೆ ಹಾಕ್ತೇನೆ"
"ಸರಿ ಅತ್ತೆ" ಸೊಸೆ ಅತ್ತೆಗೆ ರವಿಕೆ ಹಾಕಲು ಸಹಾಯ ಮಾಡಿದಳು.
"ಅಯ್ಯೋ ರಾಮಾ....ಇದರ ಕೈ ಈ ಲಂಗದ ಕೈಯಿಂದ ಹೊರಗೆ ಇಣುಕುತ್ತಲ್ಲಪ್ಪಾ...?" ಶ್ಯಾಮತ್ತೆ ಅಳುವುದೊಂದೇ ಬಾಕಿ ಇತ್ತು.
"ಅದಕ್ಯಾಕತ್ತೆ ಅಷ್ಟು ಬೇಜಾರು ಮಾಡ್ಕೊಳ್ತೀರಾ? ನಾನು ರವಿಕೆಯ ಕೈಯ್ಯನ್ನು ಗಿಡ್ಡ ಮಾಡಿ ಕೊಡಲಾ?"
"ಅಷ್ಟೊಂದು ಉಪಕಾರ ಮಾಡಿಬಿಡಮ್ಮ"
ಅಲ್ಪ ಸ್ವಲ್ಪ ಹೊಲಿಗೆಯನ್ನು ಬಲ್ಲ ಸೊಸೆ ಅರ್ಧಗಂಟೆಯಲ್ಲಿ ಅದನ್ನು ಸರಿ ಮಾಡಿ ಅತ್ತೆಯ ಮುಂದೆ ಹಿಡಿದಳು.
ಮಾರನೆಯ ದಿನ ದೂರದ ಬೆಂಗಳೂರಿನಿಂದ ಶ್ಯಾಮತ್ತೆಯ ತೌರಿನ ಕಡೆಯ ಸಂಬಂಧಿಕರ ಫೋನು ಬಂತು, `ಶ್ಯಾಮತ್ತೆ ಬಿದ್ದು ನೋವು ಮಾಡಿಕೊಂಡಿದ್ದಾರಂತಲ್ಲ? ನಾವೆಲ್ಲ ಚಿಕ್ಕೋರಿರೋವಾಗ ಅವರ ಕೈತುತ್ತು ತಿಂದಿದ್ದಕ್ಕೆ ಲೆಕ್ಕವಿಲ್ಲ. ಅವರ ಋಣ ತೀರಿಸಲಂತೂ ಸಾಧ್ಯಾನೇ ಇಲ್ಲ. ಕೊನೇಪಕ್ಷ ಊರಿಗೆ ಬಂದಿದ್ದಾಗಲಾದರೂ ಅವರ ಜೊತೆಗೆ ಒಂದರ್ಧ ಗಂಟೆ ಇದ್ದು ಹೊಗ್ತೀವಿ. ನಾವು ಆರು ಜನ ಬರ್ತಿದ್ದೀವಿ ..'ಎಂಬ  ಸುದ್ದಿ ಶ್ಯಾಮತ್ತೆಗೂ ಹೋಯ್ತು. ಸೊಸೆಯಂದಿರು ಕಾಲಿಗೆ ಚಕ್ರ ಕಟ್ಟಿಕೊಂಡು ತಿಂಡಿ, ಊಟದ ತಯಾರಿಯಲ್ಲಿ ಮುಳುಗಿ ಹೋದರು. ನೆಂಟರು ಬರಲು ಇನ್ನೇನು ಒಂದೆರಡು ಘಂಟೆ ಇದೆ ಎನ್ನುವಾಗ ಶ್ಯಾಮತ್ತೆಗೆ ಚಡಪಡಿಕೆ ಶುರುವಾಯ್ತು. `ಹೇಳಲಾರೆ, ಹೇಳದಿರಲಾರೆ...' ಎನ್ನುವಂತಹ ಘಟ್ಟಕ್ಕೆ ತಲುಪಿದರು. ಇನ್ನು ತಡೆಯಲು ಸಾಧ್ಯವೇ ಇಲ್ಲ ಎನ್ನುವಾಗ ಸೊಸೆಯನ್ನು ಕರೆದರು.
"ಏನತ್ತೇ..." ಶ್ಯಾಮತ್ತೆಯ ಚಡಪಡಿಕೆಯ ಧ್ವನಿ ಕೇಳಿ ಆತಂಕದಿಂದಲೇ ಕೈಯ್ಯಲ್ಲಿದ್ದ ಕೆಲಸವನ್ನು ಅಲ್ಲೇ ಬಿಟ್ಟು ಓಡಿ ಬಂದಿದ್ದಳು ಸೊಸೆ.
"ನೊಡಮ್ಮಾ...ನಾನು ಹೀಗೆ ಹೇಳ್ತೇನೆ ಅಂತ ಬೇಜಾರು ಮಾಡ್ಕೋಬೇಡ. ಮನೆಗೆ ಅತಿಥಿಗಳು ಬರೋವಾಗ ನಾನು ಈ ವೇಷದಲ್ಲಿದ್ದರೆ ಏನು ಚಂದ ಹೇಳು? ಈ ಲಂಗ ಹಾಕಿ ಕೂತರಂತೂ ಬಿಚ್ಚೋಲೆ ಗೌರಮ್ಮನ ತರ ಕಾಣ್ತೀನಿ. ಕುತ್ತಿಗೆಯಲ್ಲಿರೋ ಸರಗಳೆಲ್ಲ ಒಳಗೆ ಹೂತು ಹೋದಂತೆ ಕಾಣುತ್ತೆ. ಅದೂ ಅಲ್ಲದೆ ಈ ಅವತಾರದಲ್ಲಿ ಅವರ್ಯಾರೂ ನನ್ನನ್ನ ನೋಡೇ ಇಲ್ಲ. ಲಕ್ಷಣವಾಗಿ ಸೀರೆ ಉಡೋದು ಬಿಟ್ಟು ಇದ್ಯಾಕತ್ತೆ ಈ ಅಪದ್ಧದ ಲಂಗ ಅಂತ ಕೇಳಿದರೆ ನಾನೇನು ಹೇಳಲಿ?"
ಶ್ಯಾಮತ್ತೆಯ ದೀನ ಸ್ವರ, ಕಂಗೆಟ್ಟು ಹೋದ ಮುಖಭಾವ ನೋಡಿ ಸೊಸೆಯ ಕರಳು ಚುರುಕ್ ಎಂದಿತು.
ನೆಂಟರು ಬಂದರು. ಅವರೆಲ್ಲರ ಮುಖಭಾವ ಗಂಭೀರವಾಗಿತ್ತು. ಅವರ ಕಲ್ಪನೆಯಲ್ಲಿ ನಿಸ್ತೇಜರಾಗಿ ಹಾಸಿಗೆ ಹಿಡಿದ ಶ್ಯಾಮತ್ತೆಯ ಚಿತ್ರವಿತ್ತೇನೋ? ಶ್ಯಾಮತ್ತೆಯೆಂಬ ರೋಗಿಯನ್ನು ನೋಡಲು ಬರಿಕೈಯ್ಯಲ್ಲಿ ಬರುವುದೇ? ಕೈ ತುಂಬಾ ಹಣ್ಣಿನ ಪ್ಯಾಕೆಟ್ಟುಗಳು, `ಬೇಗ ಆರೋಗ್ಯ ಮರುಕಳಿಸಲಿ' ಎಂಬ ಹಾರೈಕೆಯ ಸ್ಟಿಕರುಗಳು ರಾರಾಜಿಸುತ್ತಿದ್ದ ಹೂವಿನ ಗುಚ್ಛ ಇತ್ಯಾದಿಗಳೊಡನೆ ನೆಂಟರು ಮನೆಯನ್ನು ಪ್ರವೇಶಿಸಿದರು.
ಹಾಲಿನ ಸೊಫಾದಲ್ಲಿ ನಮ್ಮ ಶ್ಯಾಮತ್ತೆ ವಿರಾಜಮಾನರಾಗಿದ್ದಾರೆ. ಸ್ನಾನ ಮುಗಿಸಿ ತಲೆಯನ್ನು ಒಪ್ಪವಾಗಿ ಬಾಚಿ ಗರಿಗರಿಯಾದ ಕಾಸರಗೋಡು ಹ್ಯಾಂಡ್ಲೂಂ ಸೀರೆ ಉಟ್ಟು ಕುತ್ತಿಗೆಯಲ್ಲಿನ ಎರಡ್ಮೂರು ಸರಗಳನ್ನು ಸೆರಗಿನ ಮೇಲೆ ನೀಟಾಗಿ ಕಾಣುವಂತೆ ಹಾಕಿಕೊಂಡಿದ್ದಾರೆ. ಮುಖದ ಶೋಭೆಗೆ ಕನ್ನಡಕ ಇನ್ನಷ್ಟು ಮೆರಗನ್ನು ಕೊಟ್ಟಿತ್ತು. ವಾಕರನ್ನು ಅತಿಥಿಗಳಿಗೆ ಕಾಣದಂತೆ ಒಳಗಿಡಲು ಬೆಳಗ್ಗೆಯೇ ಸೊಸೆಗೆ ತಾಕೀತು ಮಾಡಿದ್ದಾರೆ.
"ಬನ್ನಿ...ಬನ್ನಿ...ಕೂತ್ಕೊಳ್ಳಿ..." ಎನ್ನುತ್ತಾ ನಗುಮುಖದಿಂದ ಶ್ಯಾಮತ್ತೆ ನೆಂಟರನ್ನು ಸ್ವಾಗತಿಸಿದರು. ತಮ್ಮ ಪಕ್ಕದಲ್ಲೇ ಕೈಮಾಡಿ ತೋರಿಸುತ್ತಾ,
"ಇಲ್ಲೇ ಬನ್ನಿ...ಕೂತ್ಕೊಳ್ಳಿ....ಹೋ...ಇದ್ಯಾರೂ..? ನಮ್ಮ ಗೋಪಾಲನ ಮೊಮ್ಮಗುವಾ...?ಕೊಡಿಲ್ಲಿ...ಎತ್ತಿಕೊಳ್ತೇನೆ ಒಮ್ಮೆ..." ಎನ್ನುತ್ತಾ ಕೈಮುಂದಕ್ಕೆ ಚಾಚಿದರು.
ನೆಂಟರು ತಮ್ಮ ಕಣ್ಣನ್ನು ತಾವೇ ಚಿವುಟಿಕೊಳ್ಳುವ ಹಂತಕ್ಕೆ ಮುಟ್ಟಿದ್ದರು. ಶ್ಯಾಮತ್ತೆಗೆ ಉಶಾರಿಲ್ಲ ಎಂಬ ಸುದ್ದಿ ಹೇಗೆ ಹುಟ್ಟಿಕೊಂಡಿತು ಎಂದು ಅವರೆಲ್ಲ ಮನಸ್ಸಲ್ಲೇ ತಲೆಕೆರೆದುಕೊಂಡರು. ಶ್ಯಾಮತ್ತೆ ಮಗುವನ್ನು ನೋಡಿ ನಗುನಗುತ್ತಲೇ ಬಳಿಯಲ್ಲಿ ನಿಂತಿದ್ದ ಸೊಸೆಯೊಡನೆ ಪಿಸುಧ್ವನಿಯಲ್ಲಿ ಏನೋ ಹೇಳಿದರು. ಕ್ಷಣದಲ್ಲಿ ಆಕೆ ಒಳಗೆ ಹೋಗಿ ಬಂದಳು. ಮಗುವನ್ನು ತಮ್ಮ ಮಡಿಲಲ್ಲಿ ಕುಳ್ಳಿರಿಸಿಕೊಂಡು ನೂರು ರೂಪಾಯಿಯನ್ನು ಅದರ ಕೈಗಿಟ್ಟು ಹರಸಿದರು. ನಂತರ ಗೋಪಾಲನನ್ನು ನೋಡುತ್ತಾ ಯೋಗಕ್ಷೇಮ ವಿಚಾರಿಸಿಕೊಂಡರು. ಅವರ ದೃಷ್ಟಿ ಆತನ ಕೈಯಲ್ಲಿರುವ ಹಣ್ಣಿನ ಪ್ಯಾಕೆಟ್ಟುಗಳ ಮೇಲೆ ಬಿತ್ತು.

"ಏ ಮಾರಾಯಾ... ಯಾಕೋ ಇಷ್ಟೆಲ್ಲ ಹಣ್ಣುಗಳನ್ನ ತರೋಕೆ ಹೋದೆ? ಸುಮತೀ...,(ಗೋಪಾಲನ ಪತ್ನಿ) ನಿನ್ನ ಕೈಯ್ಯಲ್ಲಿರೋ ಹೂವಿನ ಕಟ್ಟ ನೋಡಿದ್ರೆ ಎಲ್ಲೋ ಮದುವೆ ಮನೆಗೆ ಹೊರಟ ಹಾಗಿದೆಯಲ್ಲ?" ಎಂದೆಲ್ಲಾ ಅತ್ಮೀಯವಾಗಿ ವಿಚಾರಿಸಿಕೊಂಡರು.
ನಂತರ ಸೊಸೆಯನ್ನು  ನೊಡುತ್ತಾ ಹೇಳಿದರು,
"ವೀಣಾ, ಎಲ್ಲಾ ಹಣ್ಣುಗಳನ್ನೂ ಚಿಕ್ಕದಾಗಿ ಹೆಚ್ಚಿ ಫ್ರೂಟ್ ಸಲಾಡ್ ಮಾಡಿಬಿಡಮ್ಮ....ಆರೊಗ್ಯಕ್ಕೂ ಒಳ್ಳೇದು, ಗೋಪಾಲನಿಗೆ ಫ್ರೂಟ್ ಸಲಾಡ್ ತುಂಬಾ ಇಷ್ಟ, ಅಲ್ವೇನೋ?
ಕೈ ಸ್ವಲ್ಪ ಬಿಡುವಾದಾಗ ಹೂಗಳನ್ನ ಮಾಲೆ ಮಾಡಿಬಿಡಮ್ಮ. ದೇವರಿಗೂ ಇಡು, ಉಳಿದದ್ದನ್ನ ನೀವೆಲ್ರೂ ಹಂಚಿಕೊಂಡು ತಲೆಗಿಟ್ಟುಕೊಳ್ಳಿ" ಎಂದಾಗ ಗೋಪಾಲನ ಹೆಂಡತಿ ಹೂಗುಚ್ಛದಲ್ಲಿ ಅಂಟಿಸಿಟ್ಟ `ಗೆಟ್ ವೆಲ್ ಸೂನ್' ಎಂಬ ಸ್ಟಿಕ್ಕರನ್ನು ಶ್ಯಾಮತ್ತೆಗೆ ಕಾಣದಂತೆ ತೆಗೆಯಲು ಹೆಣಗಿದಳು.

     

ಭಾನುವಾರ, ನವೆಂಬರ್ 4, 2018

ಅನಾಥರು ನಾವಲ್ಲ


`ಲಿಟ್ ಫೆಸ್ಟ್ ಮಂಗಳೂರು' ಇದರ ಬಗ್ಗೆ ನಮ್ಮ ವಾಟ್ಸ್ಯಾಪ್ ಗ್ರೂಪಲ್ಲಿ ವಿವರ ಬಂದಿತ್ತು. ಹೋಗಿ ನೋಡೋಣ ಎನಿಸಿತು. ತರಂಗದ ಸಂಪಾದಕಿ ಶ್ರೀಮತಿ ಸಂಧ್ಯಾ ಪೈ, ನಿಟ್ಟೆ ಸಮೂಹ ಸಂಸ್ಥೆಗಳ ವಿನಯ್ ಹೆಗ್ಡೆ ಮತ್ತು ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಜೊತೆಗೂಡಿ ಆಯೋಜಿಸಿದ ಕಾರ್ಯಕ್ರಮ (ಟಿ.ಎಮ್.ಎ.ಪೈ.ಹಾಲ್, ಮಂಗಳೂರು). ಇದರ ಬಗ್ಗೆ ಪೇಪರಲ್ಲಿ ನೀವು ನೋಡಿಯೇ ಇರುತ್ತೀರಿ.  ಈ ಮೂವರನ್ನೂ ಸಮಾಜ ಪ್ರೋತ್ಸಾಹಿಸುತ್ತಿರುವ ರೀತಿ ಅನನ್ಯವಾದುದು. ಸಮಾಜದಿಂದ ಪಡೆದುದನ್ನು ಹಿಂದಿರುಗಿಸಲು ಹಲವಾರು ಮಾರ್ಗಗಳಿವೆ. ಆದರೆ ಇವರು ಲಿಟ್ ಫೆಸ್ಟ್ ಮೂಲಕ ಅದನ್ನು ಹಿಂದಿರುಗಿಸಲು ನಿರ್ಧರಿಸಿದರಲ್ಲ? ನಿಜಕ್ಕೂ ಗ್ರೇಟ್!  `ಕೆರೆಯ ನೀರನು ಕೆರೆಗೆ ಚೆಲ್ಲಿ....ವರವ ಪಡೆದವರು....' ಎನ್ನುವ ಹಾಡಿನ ಸಾಲು ನೆನಪಾಯ್ತು.
`ಐಡಿಯಾ ಆಫ್ ಭಾರತ್' ಲಿಟ್ ಫೆಸ್ಟಿನ ಥೀಮ್ (ಗಮನಿಸಿ, ಐಡಿಯಾ ಆಫ್ ಇಂಡಿಯಾ ಅಲ್ಲ). ನಿನ್ನೆ ಶನಿವಾರ ನಾನು ಅಲ್ಲಿಗೆ ತಲಪುವ ಹೊತ್ತಿಗೆ ಸಂಧ್ಯಾ ಪೈಯವರ ಭಾಷಣ ಮುಗಿದಿತ್ತು. ಪ್ರಫುಲ್ಲ ಖೇತ್ಕರ್ ಅವರ ಭಾಷಣ ಮುಗಿಯುವ ಹಂತದಲ್ಲಿತ್ತು. ಡೇವಿಡ್ ಫ್ರಾಲಿ, ಮಧು ಕೀಶ್ವರ್, ಶೆಫಾಲಿ ವೈದ್ಯ, ಪ್ರಕಾಶ್ ಬೆಳವಾಡಿ, ವಿವೇಕ್ ಅಗ್ನಿಹೋತ್ರಿ, ಆನಂದ್ ರಂಗನಾಥನ್, ಆನಿರ್ಬನ್ ಗಂಗೂಲಿ ಇಷ್ಟು ಜನರ ಮಾತುಗಳನ್ನಷ್ಟೇ ಕೇಳಲು ನನಗೆ ಸಾಧ್ಯವಾಗಿದ್ದುದು. ಅಂದರೆ ಬೆಳಗ್ಗೆ ಹನ್ನೊಂದು ಘಂಟೆಯಿಂದ ಸಂಜೆ ಮೂರುವರೆವರೆಗೆ ನಾನಲ್ಲಿದ್ದೆ(ಇದರಲ್ಲಿ ಕಾಫಿ, ಊಟಕ್ಕೆಂದು ಒಂದು ಗಂಟೆ ವ್ಯಯವಾಗಿತ್ತು). ಆದರೆ ಈ ಮೂರೂವರೆ ಗಂಟೆ ಎನ್ನುವುದು ಅಮೃತ ಸಂಜೀವಿನಿಯಂತಿತ್ತು. ಬಹುಷಃ ಅಲ್ಲಿ ನೆರೆದಿದ್ದ ಪ್ರತಿಯೊಬ್ಬರಿಗೂ ಹಾಗೇ ಅನಿಸಿರಬೇಕು.
ಸಮಾಜದಲ್ಲಿ ನಡೆಯುತ್ತಿರುವಂತಹ ಕೆಲವು ಅಸಹ್ಯ ಬೆಳವಣಿಗೆಗಳನ್ನು ನಾನು,ನೀವು ಗಮನಿಸದೆ ಇರಲು ಸಾಧ್ಯವೇ ಇಲ್ಲ. ಹಿಂದೂ ಧರ್ಮದ ಅವಹೇಳನ, ನಮ್ಮ ಧಾರ್ಮಿಕ ವಿಧಿ ವಿಧಾನಗಳ ಬಗೆಗಿನ ಅಪಪ್ರಚಾರ, ಸರಕಾರದಿಂದಲೇ ನಡೆಯುತ್ತಿರುವ ದೇವಾಲಯಗಳ ಲೂಟಿ, ಸಾವಿರ ಸಾವಿರ ವರ್ಷಗಳಿಂದ ನಂಬಿಕೊಂಡು ಬಂದಿರುವಂತಹ ಆಚರಣೆಗಳಿಗೆ ಘನವೆತ್ತ ನ್ಯಾಯಾಲಯಗಳು  ಮೂಗು ತೂರಿಸುವುದು, ಜನಸೇವೆಯೇ ಈಶಸೇವೆ ಎಂದು ನಡೆದುಕೊಳ್ಳುತ್ತಿರುವ ಮಠಗಳನ್ನು ಮಾಠಾಧೀಶರನ್ನು ಮುಗಿಸಲು ನಡೆಸುವ ಹುನ್ನಾರ, ಇನ್ನು ಸ್ರ್ತೀ ಸಬಲೀಕರಣವೆಂದರೆ ಅಗತ್ಯವೇ ಇಲ್ಲದಿದ್ದರೂ ಇಂಗ್ಲಿಷ್ ಮಾತನಾಡುತ್ತಾ ಅರೆಬರೆ ಬಟ್ಟೆ ಧರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇದುತ್ತಾ ಹೆಂಡದ ಕುಪ್ಪಿ(ತೀರಾ ಲೋಕಲ್ ಶಬ್ದ ಬಳಸಿದೆ,ಕ್ಷಮಿಸಿ) ಏರಿಸುವುದು, ಸಮಾಜದಲ್ಲಿ ಒಪ್ಪಿತ ರೀತಿ ನೀತಿ ಅಂತ ಏನಿದೆಯೋ ಅದರ ಹಿನ್ನೆಲೆ, ಕಾರ್ಯ,ಕಾರಣಗಳ ಅರಿವೇ ಇಲ್ಲದೆ, `ನಾವೂ ಅದನ್ನು ಮಾಡಿದರೆ ಏನಾಗುತ್ತದೆ...?' ಎಂದು ಅಕಾರಾಳ ವಿಕಾರಾಳ ವಿರೋಧಿಸುವುದು, (ಸ್ತ್ರೀ ಶೋಷಣೆಯೇ ಬೇರೆ, ಆಧುನಿಕ `ಸುಧಾರಣಾವಾದಿ' ಸ್ರ್ತೀಯರು `ಹೋರಾಟ'ದ ದಿಕ್ಕೇ ಬೇರೆ) women empowerment ಎಂದರೆ ಇದುವೇ ಎಂದು ಬಿಂಬಿಸುವುದು.....ಹೀಗೆ ನಮ್ಮ ಮಕ್ಕಳನ್ನು, ಮಹಿಳೆಯರನ್ನು ಮತ್ತು ವ್ಯವಸ್ಥಿತ ಸಮಾಜವನ್ನು ಅಸ್ತವ್ಯಸ್ತಗೊಳಿಸುವುದೇ ಇಂದಿನ ಫ್ಯಾಶನ್ ಆಗಿಹೋಗಿದೆ. ಇದಕ್ಕೆ ಕಮ್ಮಕ್ಕು ನೀಡುವ ಶಕ್ತಿಗಳು, ಇದರ ಹಿಂದಿನ ಕೈಗಳು ಎಷ್ಟು ಅಗಾಧವಾಗಿ ಚಾಚಿವೆ ಎಂಬುದರ ಆಳ ಅಗಲದ ಪರಿವೆ ನಮಗಾರಿಗೂ ಇಲ್ಲ. ಹಲವಾರು `ಇಸಂ' ಗಳು ನಮ್ಮನ್ನು ಗುಡಿಸಿ ಗಡಿಪಾರು ಮಾಡಲು ಹೊರಟಿವೆ, ನಮ್ಮನ್ನು ಹೇಳುವವರು ಕೇಳುವವರು ಯಾರೂ ಇಲ್ಲ, ಭಾರತದಲ್ಲಿ `ಸುಖವಾಗಿ' ಜೀವಿಸಬೇಕಾದರೆ ಒಂದೋ ಮುಸಲ್ಮಾನನಾಗಿರಬೇಕು ಇಲ್ಲವೇ ದಲಿತನಾಗಿರಬೇಕು ಎನ್ನುವ ಸ್ಥಿತಿಗೆ ಮುಟ್ಟಿದ್ದೇವೆ. ಮನೆಯಿಂದ ಹೊರಗೆ ಕಾಲಿಟ್ಟರೆ ಪುನಃ ಕ್ಷೇಮವಾಗಿ ಮನೆಗೆ ಮುಟ್ಟಿಯೇನು ಎನ್ನುವ ದೈರ್ಯವಿಲ್ಲ. ಯಾಕೆಂದರೆ ನಾನು ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವಳು, ಹಿಂತುಳಿಯಲ್ಪಟ್ಟವಳು, ಇನ್ನಷ್ಟು ತುಳಿಸಿಕೊಳ್ಳಲು ತಯಾರಾಗಿರಬೇಕಾದವಳು. ಬಹುಷಃ ಮೇಲ್ಜಾತಿ ಎಂದು ಗುರುತಿಸಿಕೊಂಡವರಲ್ಲಿ  ಈ ಭಾವನೆಗಳು ಸಾಮಾನ್ಯ . ಭವಿಷ್ಯ ತೀರಾ ಕತ್ತಲು ಎನಿಸಿದುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಈ ಒಂದು ಅನಾಥ ಪ್ರಜ್ಞೆ ನಮ್ಮನ್ನು ಕಂಗಾಲು ಮಾಡುತ್ತಿರುವುದಂತೂ  ಸತ್ಯ. ಇಂತಹ ಮನಸ್ಥಿತಿಯ ಹಿನ್ನೆಲೆಯಲ್ಲಿ ನಾನು `ಲಿಟ್ ಫೆಸ್ಟ್' ಗೆ ಹೋಗಿದ್ದೆ. ಅಲ್ಲಿಂದ ಹೊರಕ್ಕೆ ಬರುವಾಗ ಭವಿಷ್ಯದ ಭಾರತ ಭವ್ಯ ಭಾರತವೇ ಆಗಬಹುದು ಎನ್ನುವ ಆಶಾವಾದ ನನ್ನೊಂದಿಗಿತ್ತು.
ಲಿಟ್ ಫೆಸ್ಟಿನ ಮೂಲ ಉದ್ದೇಶ ನಮ್ಮ ಭರತವರ್ಷದ ಶಾಂತಿ, ಸಮನ್ವಯತೆ, ಸಮಬಾಳು, ಸಹಜೀವನ, ಸಹೋದರತೆ,ಸಮಾನತೆ, ಪ್ರೀತಿಸು, ಪ್ರೀತಿ ಪಡೆದುಕೋ.... ಇವೆಲ್ಲದರ ಕುರಿತಾಗಿ ಅರಿವು ಮೂಡಿಸುವುದೇ ಆಗಿತ್ತು. ಯುವಜನತೆಯ ಭಾಗವಹಿಸುವಿಕೆ, ಲವಲವಿಕೆ, ನನ್ನ ಕಣ್ಮನಗಳನ್ನು ತುಂಬಿತ್ತು. ಡೇವಿಡ್ ಫ್ರಾಲಿ ಮತ್ತು ಅನಿರ್ಬನ್ ಗಂಗೂಲಿ ಅವರ ಪ್ಯಾನಲ್ ಡಿಸ್ಕಶನ್ ಅಂತೂ ನವ ಯುವಕರಿಗೆ ದಾರಿ ದೀಪದಂತಿತ್ತು. ಬಾರತದ ಭವಿಷ್ಯ ಅದರ ಭವ್ಯ ಪರಂಪರೆ, ವೇದ, ವೇದಾಂತ, ಯೋಗ, ಧರ್ಮಗಳ ಮೇಲೆ ನಿಂತಿದೆ. ಅದುವೇ ನಮ್ಮ ಅಡಿಪಾಯ, ಒಂದೇ ಒಂದು ಕಲ್ಲು ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನು ಫ್ರಾಲಿ ವಿವರಿಸಿದ ರೀತಿ ಅನನ್ಯವಾಗಿತ್ತು. ಮಾರ್ಕ್ಸ್ ವಾದಿಗಳ  ದೇಶವನ್ನು ಇಬ್ಭಾಗವಾಗಿಸುವ ಕುಟಿಲ ನೀತಿ, ಠೊಳ್ಳು ಸಮಾಜವಾದ, ಜಾತ್ಯಾತೀತ, ಸೆಕ್ಯಲರ್....ಇತ್ಯಾದಿ ವಿಷಬೀಜಗಳು ರಕ್ತಬೀಜಾಸುರನಂತೆ ಬೆಳೆಯುತ್ತಿರುವ ರೀತಿ, ಈ ಎಲ್ಲ ಅಪದ್ಧಗಳಿಗೆ ಇಂಬುಕೊಡಲು ಹೊರದೇಶದಿಂದ ಹರಿದುಬರುತ್ತಿರುವ ಕಾಂಚಾಣ.....ಹೀಗೆ ನಾವೆಲ್ಲರೂ ತಿಳಿದಿರಲೇಬೇಕಾದಂತಹ ಸಂಗತಿಗಳನ್ನು  ಆನಂದ್ ರಂಗನಾಥನ್, ಮಧುಕೀಶ್ವರ್, ಶೆಫಾಲಿ ವೈದ್ಯ, ವಿವೇಕ್ ಅಗ್ನಿಹೋತ್ರಿ ಮುಂತಾದವರು ಹೇಳಿದ ರೀತಿಯಿದೆಯಲ್ಲಾ...., `ಯಬ್ಬ...,ನಮ್ಮ ಮನದ ಅಳಲುಗಳಿಗೆ ಶಬ್ದದ ರೂಪಕೊಡುವವರೂ ಇದ್ದಾರಲ್ಲ...' ಎಂದೆನಿಸಿತ್ತು.
ಇನ್ನು ಪ್ರಕಾಶ್ ಬೆಳವಾಡಿ ಹೇಳಿದ ಒಂದು ಮಾತಂತೂ ಮರೆಯಲು ಸಾಧ್ಯವೇ ಇಲ್ಲ, `ಹಿಂದೂ ದೇವತೆಗಳನ್ನು ಅವಹೇಳನ ಮಾಡುತ್ತಾರೆ, ಹಿಂದೂ ಆಚರಣೆಗಳನ್ನು ಅಲ್ಲಗಳೆಯುತ್ತಾರೆ, ಹಿಂದೂ ಎನ್ನುವ ಕಾನ್ಸೆಪ್ಟೇ ಅರ್ಥಹೀನ ಎನ್ನುವಂತೆ ಮಾತನಾಡುವವರೇ ಹಿಂದೂ ದೇವಾಲಯಗಳ ದುಡ್ಡನ್ನು ಯಾಕೆ ಕೊಳ್ಳೆಹೊಡೆಯುತ್ತಾರೆ?'
 ಕಾರ್ಯಕ್ರಮದಲ್ಲಿ ಯುವಜನರ ಓಡಾಟ, ಧನಾತ್ಮಕ ಸ್ಪಂದನೆಗಳು ಹಿಂದೂಗಳಿಗೂ ಒಳ್ಳೆಯ ಭವಿಷ್ಯವಿದೆ ಎಂಬುದನ್ನು ಸೂಚಿಸಿತು. ಕಾರ್ಯಕ್ರಮವನ್ನು ಬಹಳ ಚೆನ್ನಾಗಿ ಆಯೋಜಿಸಿದ್ದಾರೆ. ಸಮಯ ಪರಿಪಾಲನೆಯಲ್ಲಿ ಕಾಯ್ದುಕೊಂಡ ಕಟ್ಟುನಿಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರವಾಯ್ತು. ಊಟ, ಕಾಫಿಯೂ ಸೊಗಸಾಗಿತ್ತು . ಇವತ್ತು ಭಾನುವಾರ, ಬಹುಷಃ ಇನ್ನಷ್ಟು ಜನಸಂದಣಿ ಇರಬಹುದು. ಅಂದ ಹಾಗೆ ಹೊರಗಡೆ ಸಾಹಿತ್ಯ ಭಂಡಾರ, ನವಕರ್ನಾಟಕ  ಪಬ್ಲಿಕೇಷನ್ ಮುಂತಾದ ಪ್ರಕಾಶಕ ದಿಗ್ಗಜಗಳ ಏಳೆಂಟು ಪುಸ್ತಕ ಮಳಿಗೆಗಳಿವೆ. ಇನ್ನೊಂದು ಸ್ಟಾಲಿನಲ್ಲಿ ಆವೆ ಮಣ್ಣಿನಿಂದ ಗೊಂಬೆ ತಯಾರಿಸುತ್ತಾ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆಯನ್ನು ನಡೆಸಿಕೊಡುತ್ತಿದ್ದರು. ಅಂತೂ ಎಲ್ಲೆಲ್ಲೂ ಯುವಕ ಯುವತಿಯರದ್ದೇ ಓಡಾಟ. ದಿನವೊಂದನ್ನು ಸಾರ್ಥಕವಾಗಿ ಕಳೆದಿದ್ದೆ. ಸಂಜೆಯ ಭೈರಪ್ಪನವರ ಮತ್ತು ಸೂಲಿಬೆಲೆಯವರ ಕಾರ್ಯಕ್ರಮ ಮಿಸ್ ಮಾಡಿಕೊಳ್ತಿದ್ದೇನೆ ಎಂಬ ಬೇಸರವಂತೂ ಇದ್ದೇ ಇತ್ತು.                   

ಶನಿವಾರ, ಸೆಪ್ಟೆಂಬರ್ 1, 2018

ಆಹಾ.....ಕನ್ನಡ ಮನಸುಗಳೇ....




"ಹಾ...,ಶೀಲಕ್ಕಾ ನೀವೂ ಬಂದಿದೀರಾ...? ಆಗ್ಲೇ ಬಂದ್ರಾ...?"
"ಹೋ....ಶೀಲಾ...,ಟಿಕೆಟ್ ಆಯಿತಾ...? ನಾವಂತೂ ರಗಳೆ ಬೇಡಾ ಅಂತ ಆನ್ಲೈನಲ್ಲಿ ಟಿಕೆಟ್ ಬುಕ್ ಮಾಡಿಯೇ ಬಂದಿದ್ದು...."
"ಯೋ....ಶೀಲಕ್ಕಾ...,ನಿಮ್ಮನ್ನು ನೋಡದೆ ಎಷ್ಟು ದಿನ ಆಯ್ತು....! ಸಿನೆಮಾಕ್ಕೆ ನೀವು ಬಂದೇ ಬರ್ತೀರಿ ಅಂತ ಖಂಡಿತ ಗೊತ್ತಿತ್ತು ..."
"ನಮಸ್ಕಾರ. ಎಷ್ಟೊತ್ತಿಗೆ ಬಂದ್ರಿ? ರಶ್ಶ್ ಉಂಟಲ್ಲ? ನೀವು ಸಾಲಲ್ಲಿ ನಿಲ್ಲೋದ್ಯಾಕೆ? ನಮ್ಮ ಹುಡುಗ ಹೇಗೂ ನಿಂತಿದ್ದಾನೆ.ಅವನ ಕೈಯಲ್ಲೇ ಟಿಕೆಟ್ ದುಡ್ಡು ಕೊಟ್ಟುಬಿಡಿ...."
"ಓಹೋ....ಶೀಲಾ, ತುಂಬ ಸಮಯದ ನಂತರ ಭೇಟಿ ಅಲ್ವಾ? ಮಕ್ಕಳೆಲ್ಲ ಹೇಗಿದ್ದಾರೆ? ಸಿನೆಮಾ ಬಾರೀ ಗೌಜಿ ಮಾಡ್ತಾ ಉಂಟಲ್ವ, ಹಾಗೇ ಒಮ್ಮೆ ನೋಡಿಬಿಡುವಾ ಅಂತ..."
ಹೀಗೆ ಎತ್ತ ತಿರುಗಿದರೂ ಅಪ್ಪಟ ಕಾಸರಗೋಡು ಕನ್ನಡದ ಜೇನು ಹನಿ ಹನಿಯಾಗಿ ಕಿವಿಯ ಮೂಲಕ ಹಾದು ಹೃದಯದಲ್ಲಿ ಮಡುಗಟ್ಟಿ ನಿಂತದ್ದು ನಮ್ಮ ಕಾಸರಗೋಡಿನ ಮೂವಿಮ್ಯಾಕ್ಸ್ ಥಿಯೆಟರಿನ ಟಿಕೆಟ್ ಕೌಂಟರ್ ಎದುರು ನಾನು ನಿಂತಿದ್ದಾಗ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನೆಮಾ ರಿಲೀಸ್ ಆಗಿತ್ತಲ್ಲ? ಫಸ್ಟ್ ಡೇ ಫಸ್ಟ್ ಶೋ ನೋಡಬೇಕೆನ್ನುವ ಆಸೆ ಈಡೇರಿರಲಿಲ್ಲ. ಸೆಕೆಂಡ್ ಡೇ ಹೋಗಬೇಕಾಯ್ತಲ್ಲ ಎಂಬ ಬೇಸರ ಎಲ್ಲ ಆತ್ಮೀಯ ಮಾತುಗಳ ಪ್ರವಾಹದಲ್ಲಿ ಕೊಚ್ಚಿಯೇ ಹೋಯ್ತು. ಸಿನೆಮಾದ ಬಗ್ಗೆ ನಾನು ಪ್ರತ್ಯೇಕವಾಗಿ ಹೇಳುವಂತಾದ್ದು ಏನೂ ಇಲ್ಲ. ಸಂವಹನ ಮಾಧ್ಯಮಗಳು, ಸೆಲೆಬ್ರಿಟಿಗಳು, ವಿ..ಪಿ.ಗಳು, ಜನಸಾಮಾನ್ಯರು ಹೀಗೆ ಪ್ರತಿಯೊಬ್ಬರೂ ನೋಡಿ ಕೇಳಿ ಅನುಭವಿಸಿ ಮೆಚ್ಚುಗೆಯ ಸಾಗರವನ್ನೇ ಹರಿಯಬಿಟ್ಟಿದ್ದಾರೆ. ಸಾಗರದ ಅಲೆಗಳು ಫಳ ಫಳ ಹೊಳೆಯುತ್ತಲೂ ಇದೆ. ನಾನೂ ಪುನಃ ಅದನ್ನೇ ಕೊರೆಯುತ್ತಿಲ್ಲ. ನಾನಿಲ್ಲಿ ಹೇಳ ಹೊರಟಿರುವುದು ಕನ್ನಡ ಮನಸುಗಳ ಮಿಲನದ ಸಂದರ್ಭ, ಸನ್ನಿವೇಶ.
  ಥೀಯೆಟರ್ ಒಳ ಹೋಗುತ್ತಿದ್ದಂತೆ ಗರಬಡಿದು ಹೋದೆ. ಬೆರಳೆಣಿಕೆಯಷ್ಟೇ ಖಾಲಿ ಕುರ್ಚಿಗಳು ಮಾತ್ರ ಉಳಿದಿದ್ದುವು! ಅದೂ ಕಾಸರಗೋಡಿನ ಥಿಯೇಟರಲ್ಲಿ ...., ಕನ್ನಡ ಸಿನೆಮಾಕ್ಕೆ! (ನನಗೆ ನೆನಪಿರುವ ಹಾಗೆ ಡಾ.ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ, ಭಕ್ತಕುಂಬಾರ ಸಿನೆಮಾಗಳಿಗೆ ಕಾಸರಗೋಡಿನಲ್ಲಿ ಇದೇ ರೀತಿಯ ಪ್ರತಿಕ್ರಿಯೆ ಇತ್ತು). ಅಕ್ಕ ಪಕ್ಕ ಸುತ್ತ ಮುತ್ತ ಎಲ್ಲೆಲ್ಲೂ ಕನ್ನಡ ಕಲರವ. ಸ್ವಲ್ಪ ಹೊತ್ತಿನಲ್ಲಿ ಪರೆದೆಯಲ್ಲೂ ಅದೇ ಕಾಸರಗೋಡು ಕನ್ನಡದ ಚಿಲಿಪಿಲಿ! ಅದು ಸಿನೆಮಾ ಆಗಿರಲಿಲ್ಲ, ನನ್ನ ಬಾಲ್ಯವೇ ಆಗಿತ್ತು. ಬಳಿಯಲ್ಲಿ ಕುಳಿತ ಮಹಿಳೆ ನನ್ನನ್ನು ಮುಟ್ಟಿ ಮಾತನಾಡಿಸಿದಾಗಷ್ಟೇ ಇಹಲೋಕಕ್ಕೆ ಮರಳಿದೆ. 
"ನೀವು ಕಡ್ಲೆ ತಿನ್ತೀರಾ?"ಪಕ್ಕದಲ್ಲಿ ಕುಳಿತಿದ್ದ ಮಹಿಳೆ  ಕೇಳುತ್ತಿದ್ದರು. ಕತ್ತಲಲ್ಲಿ ಆಕೆಯ ಮುಖ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಆದರೆ ಆಕೆ ನನ್ನ ಪರಿಚಿತಳಂತೂ ಆಗಿರಲಿಲ್ಲ. ನಯವಾಗಿ ತಿರಸ್ಕರಿಸಿದೆ. ಬೇಸರಗೊಂಡರೇನೋ? "ನಾನು ಮನೆಯಲ್ಲೇ ಹುರಿದದ್ದು ತಿನ್ನಿ.." ಎಂದಾಗ ಅಚ್ಚರಿಗೊಂಡೆ. "ನೀರು ಬೇಕಾ?" ಪುನಃ ಕೇಳಿದರು. "ಬೇಡ, ನಾನು ತಂದಿದ್ದೇನೆ" ಎಂದೆ. ಬಂಧುವಲ್ಲ, ಸ್ನೇಹಿತಳಲ್ಲ, ಆದರೂ ಆತ್ಮೀಯತೆ! ಕನ್ನಡ ಎನ್ನುವ ಮಧುಮಧುರ ಕೊಂಡಿಯೊಂದೇ ನಮ್ಮನ್ನು ಬೆಸೆದದ್ದು. ಮತ್ತೆ ಪರೆದೆ ಯೊಳಕ್ಕೆ ಹೊಕ್ಕೆ.
`...ನನ್ನ ವಾರಭವಿಷ್ಯ ನೋಡಿ ಹೇಳು ಮಾರಾಯಾ...'
`ಅದ್ರಲ್ಲಿ ಎಂತ ಬೊಜ್ಜ ಸಾ ಇಲ್ಲ...'
`ನನ್ಗೆ ರಾಮಣ್ಣ ರೈ ಮೇಲೆ ಕ್ರಶ್ ಆಗಿದೆ ಮಾರಾಯಾ...'
` ಭುಜಂಗ ಬಾರಾ....ಭಯಂಕರ ಪೆಟ್ಟು ಉಂಟು...'
ಎಲ್ಲವನ್ನೂ ಮನದಣಿಯೆ ಅನುಭವಿಸಿದೆ. ಅನಂತ್ ನಾಗ್ ಎನ್ನುವ ಮೇರು ಕಲಾವಿದನ ಎಂಟ್ರಿ ಸೀನ್ ಮನಸ್ಸಿಗೆ ಸ್ವಲ್ಪ ಕಿರಿಕಿರಿ ಎನಿಸಿ `ಹೀಗೆ ಬೇಕಿತ್ತೇ?' ಎನಿಸಿದರೂ ಮುಂದೆ ಆತನ ಡೈಲಾಗುಗಳು ಮುದ ನೀಡಿದುವು. ಕೊನೆಯ ಕೋರ್ಟ್ ಸೀನಲ್ಲಿ `ಪೀಕಾಕ್ ಸ್ವಾಮಿ'ಗಳ ಮಾತು ಪ್ರೇಕ್ಷಕರ ನರನಾಡಿಗಳಲ್ಲಿ ವಿದ್ಯುತ್ ಸಂಚಾರವನ್ನುಂಟುಮಾಡಿತ್ತು. ಅವರ ಕಿವಿಗಡಚಿಕ್ಕುವ ಚಪ್ಪಾಳೆ, ವಿಸಿಲು, ಕೇಕೇ ಶಬ್ದಗಳೊಳಗೆ ನನಗರಿವಿಲ್ಲದಂತೆ ನಾನೂ ವಿಸಿಲಾದೆ,ಚಪ್ಪಾಳೆಯಾದೆ. ಕಾಸರಗೋಡಿನ ಮಗಳಾಗಿ ಸಿನೆಮಾವನ್ನು ಇಂಚಿಂಚಾಗಿ ಅನುಭವಿಸಿದೆ. ಛೇ...ಮುಗಿಯಿತಲ್ಲ? ಎನ್ನುವ ಅನಿಸಿಕೆ ಒಂದು ಕಡೆಯಾದರೆ `ಓಹೋ....ಸರಿಯಾಗಿಯೇ ಪಾಠ ಕಲಿಸಿದ್ದಾರೆ ಮಲೆಯಾಳೀ ಭಾಷಾಂಧರಿಗೆ....' ಎನ್ನುವ ಸಂತಸ ಇನ್ನೊಂದೆಡೆ.  ಅನಂತನಾಗ್ ಡಯಲಾಗುಗಳ ಗುಂಗಿನಲ್ಲೇ ಸಿನೆಮಾ ಹಾಲಿನಿಂದ ಹೊರಕ್ಕೆ ಬಂದೆ. ಆಗ ನಾನು ಒಳ ಪ್ರವೇಶಿಸುವಾಗ ಇದ್ದುದಕ್ಕಿಂತಲೂ ಹೆಚ್ಚಿನ ಜನಸಂದಣಿ ಅಲ್ಲಿತ್ತು! ಮತ್ತೆ ಚಿರಪರಿಚಿತ ಮುಖಗಳ ಆತ್ಮೀಯ ನಗು ಮಾತುಗಳ ಪುನರಾವರ್ತನೆ. ಮಾತಿನ ಒಕ್ಕಣೆ ಮಾತ್ರ ಬದಲಾಗಿತ್ತು.
"ಹೋ...ಶೀಲಕ್ಕಾ...,ಹೇಗಿತ್ತು ಸಿನೆಮಾ? ಅನಂತ್ನಾಗ್ ಇದ್ದ ಮೇಲೆ ಕೇಳುದೇ ಬೇಡ ಅಲ್ವಾ?"
"ನಮಸ್ತೆ ಶೀಲಕ್ಕಾ..., ಬಾರೀ ಒಳ್ಳೆದುಂಟಂತೆ ಅಲ್ವಾ ಸಿನೆಮಾ?"
ಹೀಗೆ ಎಲ್ಲರೊಡನೆ ಬೆರೆಯುತ್ತಾ ನಗುತ್ತಾ ಬಾಗಿಲಿನೆಡೆಗೆ ತಿರುಗಿದೆ. ಆಗ ಬಂದರು ನೋಡಿ ಕನ್ನಡ ಹೋರಾಟಗಾರರು.
"ಹ್ಹ...ಶೀಲಾ...ಸಿನೆಮಾ ಮುಗಿಸಿ ಬರ್ತಾ ಇದ್ದೀರಾ...?"
"ಹೌದು. ನೀವು ಎಲ್ರೂ ಇದ್ದೀರಲ್ಲ? ನಿಮ್ಮ ಹೋರಾಟಕ್ಕೆ ಸಿನೆಮಾ ಇನ್ನಷ್ಟು ಸ್ಫೂರ್ತಿಯಾದೀತು ..." ಎಂದೆ. ಅವರುಗಳ ಮುಖದಲ್ಲಿ ಒಂದು ರೀತಿಯ ತಾತ್ಸಾರದ ಭಾವ ಮಿಂಚಿ ಮರೆಯಾಯಿತು. ಅವಸರವಸರವಾಗಿ ಒಳಕ್ಕೆ ಹೋದರು. ನಾನು ಮನೆಯ ಹಾದಿ ಹಿಡಿದೆ. ಸಿನೆಮಾ ನೋಡುವಾಗ ಇದ್ದ ಉತ್ಸಾಹ, ಸಂತಸ, ಸಡಗರ ಮರೆಯಾಗಿ ಯೋಚನೆಗಳು ಮನಸ್ಸನ್ನು ಆಕ್ರಮಿಸಿಕೊಂಡವು. ನಮ್ಮ ಕಾಸರಗೋಡು ಕೇರಳಕ್ಕೆ ಸೇರಿದ ಲಾಗಾಯ್ತಿನಿಂದ ಪ್ರದೇಶವು ಕರ್ನಾಟಕದ  ತೆಕ್ಕೆಗೆ ಮರಳ ಬೇಕೆಂಬ ಹೋರಾಟದಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದಂತಹ ಪೈಗಳು, ರೈಗಳು, ಭಂಡಾರಿಯವರು, ಕುಣಿಕುಳ್ಳಾಯರು, ಲಲಿತಾ ಡಾಕ್ಟ್ರು, ಪುರುಷೋತ್ತಮ ಮಾಷ್ಟ್ರು, ಉಮೇಶ ನಾಯಕರು ಇವರೆಲ್ಲ ಕಾಸರಗೋಡಿನ ಕಣ್ಮಣಿಗಳು, ಪ್ರಾಥಃಸ್ಮರಣೀಯರು. ಇವರೆಲ್ಲರ ಗುರಿಯೂ ಒಂದೇ ಆಗಿತ್ತು, ದಾರಿಯೂ ಒಂದೇ ಆಗಿತ್ತು. ಆದರೆ ಇತ್ತೀಚೆಗಿನ ಕೆಲವೆಲ್ಲ ಬೆಳವಣಿಗೆಗಳು ಬಹಳ ಬೇಸರ ತರಿಸುವಂತಾದ್ದು. `ಕಾಸರಗೋಡು ಕನ್ನಡನಾಡು' ಎಂಬ ಘೋಷಣೆಯನ್ನು ಒಕ್ಕೊರಲಿನಿಂದ ಘೋಷಿಸಬೇಕಾದ ಕನ್ನಡಿಗರೊಳಗೆ ಹಲವು ಗುಂಪುಗಳಾಗಿ ಹೋಗಿವೆ. ಪ್ರತಿಯೊಂದಕ್ಕೂ ಸೊಗಸಾದ ಹೆಸರುಗಳೂ ಉದ್ದೇಶಗಳೂ ಇವೆ. ಕನ್ನಡ ಪರವಾದ ಕೆಲಸಗಳೂ ನಡೆಯುತ್ತಿವೆ. ಆದರೆ ಎಲ್ಲಾ ಬಣ್ಣ ಮಸಿ ನುಂಗಿತು ಎಬಂತೆ ಒಳ ರಾಜಕೀಯ ಎನ್ನುವುದು ಇದೆಯೆಲ್ಲ? `ಇಬ್ಬರ ನ್ಯಾಯ ಮೂರನೆಯವನಿಗೆ ಆಯ' ಎನ್ನುವಂತಾಗಿದೆ. ಮಲೆಯಾಳಿಗಳ ಮಿತಿ ಮೀರಿದ ದಬ್ಬಾಳಿಕೆಗೆ ಇದೂ ಒಂದು ಕಾರಣವೇ ಹೌದು. ಇತ್ತೀಚೆಗೆ ನಡೆದ ನನ್ನದೇ ಒಂದು ಉದಾಹರಣೆಯನ್ನು ಕೊಡುತ್ತೇನೆ. ಕಾಸರಗೋಡಿನ ಕನ್ನಡಿಗರ ಮೇಲೆ ಮಲೆಯಾಳಂ ಬಾಷಾ ಹೇರಿಕೆಯ ವಿರುದ್ಧ ನಡೆದ ಸತ್ಯಾಗ್ರಹದಲ್ಲಿ ನಾನೂ ಪಾಲುಗೊಂಡಿದ್ದೆ. ಅದನ್ನು ಕೊನೆಗೊಳಿಸಿ ಹೊರಕ್ಕೆ ಬರುವಾಗ ಚೆನ್ನಾಗಿ ಪರಿಚಯವಿರುವ ಕನ್ನಡಿಗರಿಬ್ಬರು ನನ್ನ ಪಕ್ಕದಿಂದಲೇ ಹಾದು ಹೋಗಿದ್ದರು. ನನ್ನ ಪರಿಚಯವೇ ಇಲ್ಲದಂತೆ! ಯಾಕೆ ಗೊತ್ತೇ? ನಾನು ಭಾಗವಹಿಸಿದ್ದ ಸತ್ಯಾಗ್ರಹ ಕಾರ್ಯಕ್ರಮವನ್ನು ಸಂಘಟಿಸಿದವರು ಇನ್ನೊಂದು ಬಣದವರು. ಇಲ್ಲಿ ಒಂದು ಸಂಘಟನೆಯವರು ಆಯೋಜಿಸುವ ಕಾರ್ಯಕ್ರಮಗಳನ್ನು ಇನ್ನೊಂದು ಸಂಘಟನೆಯವರು ಪ್ರೋತ್ಸಾಹಿಸುವುದೇ ಇಲ್ಲ! ಕನ್ನಡ ಸಂಘಟನೆಗಳು ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಹ್ವಾನ ಹೋಗುವ ರೀತಿಯೂ ವಿಚಿತ್ರವಾಗಿದೆ. ಒಂದು ಸಂಘಟನೆಯ ಜೊತೆಗೆ ಗುರುತಿಸಿಕೊಂಡವರನ್ನು ಇನ್ನೊಂದು ಸಂಘಟನೆಯವರು ಕರೆಯುವುದೇ ಇಲ್ಲ! ಕಹಿ ಮಲೆಯಾಳೀ ಅಧಿಕಾರಿಗಳ ಪಾಲಿಗೆ ಸಿಹಿಯಾದದ್ದು ಮಾತ್ರ ದುರಂತ. ಕನಿಷ್ಟ ಪಕ್ಷ ಹಿ.ಪ್ರಾ.ಶಾ.ಕಾ. ಸಿನೆಮಾ ನೋಡುವ ವಿಚಾರದಲ್ಲಾದರೂ ಎಲ್ಲಾ ಕನ್ನಡ ಸಂಘಟನೆಗಳು, ಸಮಸ್ತ ಕನ್ನಡಿಗರು ಒಗ್ಗೂಡಿದರಲ್ಲ? ಕ್ರೆಡಿಟ್ಟು ನಿರ್ದೇಶಕ ರಿಷಬ್ ಶೆಟ್ರಿಗೆ ಸಲ್ಲಬೇಕು. `ಅವರವರ ತಲೆಯಡಿಗೆ ಅವರವರ ಕೈ' ಎನ್ನುವ ಗಾದೆ ಮಾತು ಇತ್ತೀಚೆಗೆ ಮಂಗಲ್ಪಾಡಿ ಸರಕಾರಿ ಶಾಲೆಯಲ್ಲಿ ಸಮಸ್ಯೆ ಉದ್ಭವಿಸಿದಾಗ ಮತ್ತೊಮ್ಮೆ ನಿಜವೆಂದು ಸಾಬೀತಾಯ್ತು. (ಕನ್ನಡ ಮಕ್ಕಳಿಗೆ ಮಲಯಾಳಂ ಶಿಕ್ಷಕನ ನೇಮಕಾತಿ ಆದಾಗ ಶಾಲಾ ಅಧ್ಯಾಪಕರು, ಸ್ಥಳೀಯರು, ವಿದ್ಯಾಥಿಗಳು,ಹೆತ್ತವರೇ ಬಲವಾಗಿ ವಿರೋಧಿಸಿ ತಾತ್ಕಾಲಿಕ ಯಶಸ್ಸನ್ನೂ ಗಳಿಸಿದ್ದಾರೆ). ಸ್ವಾರ್ಥವರಿಯದ ನಿಜಪ್ರೇಮದ ಕನ್ನಡ ಮಕ್ಕಳು ಅವರಿವರಿಗೆ ಕಾಯದೆ ಸೆಟೆದು ನಿಲ್ಲಬೇಕು. ತಮಗೋಸ್ಕರ ತಮ್ಮ ಭವಿಷ್ಯಕ್ಕೋಸ್ಕರ ತಾವೇ ಹೋರಾಡಬೇಕು. ಕಾಸರಗೋಡಲ್ಲೇ ಬಾಳಬೇಕು ಎನ್ನುವುದೇ ಸಿನೆಮಾದ ತಿರುಳು.             
     
          

ಶುಕ್ರವಾರ, ಮೇ 18, 2018

ಲೇಡಿಗೊಶನ್ ಆಸ್ಪತ್ರೆಯ ಜನರಲ್ ವಾರ್ಡಿನಲ್ಲಿ..



ಶ್ರಾವಣ್ ಎಮ್.ಬಿ.ಬಿ.ಎಸ್.ಮುಗಿಸಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೌಸ್ಸರ್ಜನ್(ಮೆಡಿಕಲ್ ಇಂಟರ್ನ್) ಆಗಿ ಕೆಲಸ ಮಾಡುವ ನವ ವೈದ್ಯ. ಹೌಸರ್ಜನುಗಳು ಒಂದು ವರ್ಷದ ಅಭ್ಯಾಸ ಕಲಿಕೆಯಲ್ಲಿ ಶರೀರದ ಬೇರೆ ಬೇರೆ ಅಂಗಾಂಗಗಳಿಗೆ ಸಂಬಂಧಪಟ್ಟ ವಿಭಾಗಗಳಲ್ಲಿ ಕೆಲಸ ಮಾಡುತ್ತಾ ಪರಿಣಿತಿಯನ್ನು ಪಡೆಯುತ್ತಾರೆ. ಎರಡು ತಿಂಗಳಿಗೊಮ್ಮೆ ಕಲಿಕಾ ವಿಭಾಗ ಬದಲಾಗುತ್ತಿರುತ್ತದೆ. ಉದಾ: ಎರಡು ತಿಂಗಳು ಮಕ್ಕಳ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದರೆ ಮುಂದಿನ ಎರಡು ತಿಂಗಳು ಮೂಳೆ ಸಂಬಂಧಿ ರೋಗಗಳ ವಿಭಾಗದಲ್ಲಿ ಕೆಲಸ ಮಾಡುತ್ತಾರೆ. ಹೀಗೆ ಒಂದು ವರ್ಷವಿಡೀ ಬೇರೆ ಬೇರೆ ವಿಭಾಗಗಳಲ್ಲಿ ದುಡಿಯುತ್ತಾರೆ. ಯುವ ವೈದ್ಯ ತನ್ನ ಇಂಟರ್ನ್ಶಿಪ್ಪಿನ ಎರಡನೇ ಭಾಗವಾದ ಗೈನಕಾಲಜಿ(ಸ್ತ್ರೀ ರೋಗ ಶಾಸ್ತ್ರ) ವಿಭಾಗದಲ್ಲಿ ಕರ್ತವ್ಯಕ್ಕೆ ನಿಯುಕ್ತಿಗೊಂಡ. ಎರಡು ತಿಂಗಳ ಅವಧಿಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ವಿದ್ಯಾರ್ಥಿಗಳನ್ನು ಬೇರೆ ಬೇರೆ ಗುಂಪುಗಳನ್ನಾಗಿ ಮಾಡಿ ಡ್ಯೂಟಿಗೆ ಹಾಕುತ್ತಾರೆ. ಮೊದಲ ಹದಿನೈದು ದಿನ ಸ್ತ್ರೀ ರೋಗ ವಿಭಾಗ, ನಂತರದ ಹದಿನೈದು ದಿನ ಹೆರಿಗೆ ವಿಭಾಗ, ಮುಂದೆ ಗರ್ಭಿಣಿಯರ ವಿಭಾಗ, ಕೊನೆಗೆ ಶಸ್ತ್ರಚಿಕಿತ್ಸೆ ಮುಗಿಸಿ ವಾರ್ಡಲ್ಲಿ ದಾಖಲಾದವರ ವಿಭಾಗ(ಪೋಸ್ಟ್ ಆಪೆರೇಟಿವ್ ವಾರ್ಡ್). ಶ್ರಾವಣ್ ಇತರ ಕೆಲವು ವಿದ್ಯಾರ್ಥಿಗಳೊಂದಿಗೆ ಸ್ತ್ರೀ ರೋಗ ವಿಭಾಗದಲ್ಲಿ ಕರ್ತವ್ಯಕ್ಕೆ ನೇಮಕಗೊಂಡ. ವಿಧವಿಧದ ರೋಗಗಳು ಮತ್ತು ಚಿಕಿತ್ಸಾ ವಿಧಾನಗಳ ಕುರಿತು ಅಭ್ಯಾಸ ಮಾಡುತ್ತಾ ಗೈನಕಾಲಜಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ (ಅವರೂ ಅಲ್ಲಿ ಕೆಲಸ ಮಾಡುತ್ತಿರುತ್ತಾರೆ) ಸಹಾಯಕನಾಗಿ ದುಡಿಯುತ್ತಾ ಹಗಲು ರಾತ್ರಿ ರೋಗಿಗಳೊಡನೆ ಬೆರೆಯುತ್ತಾ ಲೇಡಿಗೋಶನ್ ಆಸ್ಪತ್ರೆಯ ಖಾಯಂ ನಿವಾಸಿ ಎನ್ನುವಷ್ಟರ ಮಟ್ಟಿಗೆ ಅಲ್ಲಿಯ ಜನರಿಗೆ ಚಿರಪರಿಚಿತನಾದ. ವಿಭಾಗದಲ್ಲಿ ಅಂದು ಅವನ ಕೊನೆಯ ದಿನದ ಡ್ಯೂಟಿಯಾಗಿತ್ತು. ದಿನ ಹೊಸದಾಗಿ ದಾಖಲಾದ ಒಳರೋಗಿಗಳ ಮೇಲುಸ್ತುವಾರಿಗೆ ಹೊರಟ. ಅದು ಸರಕಾರಿ ಆಸ್ಪತ್ರೆಯ ಜನರಲ್ ವಾರ್ಡಿನ ಮಹಿಳಾ ವಿಭಾಗ.  ಹೆಚ್ಚಿನವರೂ ಬಡವರು. ದುಡ್ಡು ಖರ್ಚು ಮಾಡಲು ಮನಸ್ಸಿಲ್ಲದೆ ರೋಗಿಯನ್ನು ತಂದು ಅಲ್ಲಿ ಹಾಕಿ ಹೋದವರೂ ಇದ್ದರು. ನೋವು, ಯಾತನೆ, ಜಿಗುಪ್ಸೆ, ಹತಾಶೆ, ಅಳು, ಹರಟೆ, ಗಾಸ್ಸಿಪ್ಪು, ಜಗಳ....ಇವೆಲ್ಲವೂ ಅಲ್ಲಿ ಸಾಮಾನ್ಯ. ಶ್ರಾವಣ್ ಕೈಯ್ಯಲ್ಲಿ  ಕೇಸ್ ಶೀಟುಗಳನ್ನು ಹಿಡಿದುಕೊಂಡು ಸಂಬಂಧಪಟ್ಟ ರೋಗಿಗಳನ್ನು ತಪಾಸಣೆ  ಮಾಡುತ್ತಾ ಜೊತೆಯಲ್ಲಿದ್ದ  ಸಿಸ್ಟರಿಗೆ ಸೂಚನೆಗಳನ್ನು ಕೊಡುತ್ತಾ  ಬೆಡ್ ನಂಬರ್ 26 ಕ್ಕೆ ಬಂದ. 65 ರಿಂದ 70 ವರ್ಷ ವಯಸ್ಸಾಗಿರಬಹುದಾದ ಮಹಿಳೆಯೋರ್ವಳು ಕಂಗೆಟ್ಟಂತೆ ಕುಳಿತಿದ್ದಳು. ಮೊದಲ ನೋಟದಲ್ಲೇ ಆಕೆ  ಉತ್ತರ ಕರ್ನಾಟಕದವಳೆಂದು  ಯಾರೂ ಹೇಳಬಹುದಾಗಿತ್ತು. ಸಣಕಲು ಶರೀರ, ಅರ್ಧಹಣೆ ಮುಚ್ಚಿದ ಕುಂಕುಮ ಬೊಟ್ಟು. ಉಟ್ಟಿದ್ದ ಹಳೇಯದಾದ ಇಳಕಲ್ ಸೀರೆಯ ಸರಗನ್ನು ತಲೆ  ಮುಚ್ಚಿಕೊಳ್ಳುವಂತೆ ಹೊದೆದಿದ್ದಳು. ದವಡೆಯಲ್ಲಿ ತಾಂಬೂಲ ಇರುಕಿಕೊಂಡಿತ್ತು. ಹಾಸಿಗೆ ಮೇಲೆ ಕುಳಿತುಕೊಂಡು ಆತಂಕದಿಂದ ಸುತ್ತಲೂ ಕಣ್ಣು ಹೊರಳಿಸಿ ನೋಡುತ್ತಿದ್ದಳು.
ಶ್ರಾವಣ್: "ಏನಜ್ಜೀ...ಇವತ್ತು ಬಂದ್ರಾ?"
ಅಜ್ಜಿ: "ಹೂಂನ್ರೀ...ಡಾಕ್ಟ್ರೀಸಾಯೇಬ್ರಾ...."
ಶ್ರಾವಣ್:(ಕೇಸ್ ಶೀಟ್ ನೋಡುತ್ತಾ) " ಖಾಯಿಲೆ ಶುರುವಾಗಿ ಎಷ್ಟು ಸಮಯವಾಯ್ತಜ್ಜೀ?"
ಅಜ್ಜಿ: "ಒಂದೆರಡು ತಿಂಗ್ಳಾ ಆತ್ರೀ ಯಪ್ಪಾ...."
ಶ್ರಾವಣ್: "ನಿಮ್ಮ ಜೊತೆಯಲ್ಲಿ ಯಾರಿದ್ದಾರಜ್ಜೀ? ನಾನು ಮಾತ್ನಾಡಬೇಕಲ್ಲ?" ಡಾಕ್ಟರು ಅಷ್ಟು ಹೇಳಿದ್ದೇ ತಡ, ಅಜ್ಜಿ ಕುಳಿತಲ್ಲಿಂದ ಎದ್ದು ಡಾಕ್ಟರರೆದುರು ಎರಡೂ ಕೈಗಳನ್ನು ಜೋಡಿಸಿ ನಿಂತುಕೊಂಡು ನಡುಗುವ ಸ್ವರದಲ್ಲಿ ಹೇಳತೊಡಗಿದಳು,
"ಡಾಕ್ಟ್ರೀ ಸಾಯೇಬ್ರಾ....ಏನ್ ಹೇಳುವಾಕೀ ನಾನು? ....ನಮ್ಮೂರು ಬಾಗಲ್ಕೋಟ. ಈವಾಗ ನನ್ ಮನೀಯಂವಾ ಅಲ್ಲಿ ನಮ್ ಜಮೀನ್ದಾಗೆ ಒಬ್ನೇ ದುಡೀವಂಗೆ ಆಗೋತಲ್ರೀ...,ನಾನು ಮಗನ್ ತಾವ ಇಲ್ಲೇ ಸಿಟಿನಲ್ಲಿದ್ದೀನ್ರೀ...., ಸೊಸಿ ಬಾಣಂತನಕ್ಕ ಬಂದಿದ್ದೆ ನೋಡ್ರೀ....ವೊಂದು ವರ್ಷ ಆತ್ರೀ ಮಗೂಗೆ....ಇನ್ನೂ ನನ್ನ ಊರಿಗ್ ಕಳ್ಸಾಕ್ ಮನಸ್ಸ ಮಾಡ್ನಿಲ್ಲ ನೋಡ್ರೀ ನನ್ಮಗ....ಎಲ್ಲಾ ಸೊಸೀ ಚಿತಾವಣೀ....ಗಂಡ ಹೆಣ್ತಿ ಹೊರಗ್ ದುಡಿತಾರ್ರಿ....ಮಗೀನ ಚಾಕ್ರೀ...ಮನಿ ಚಾಕ್ರೀ....ಎಲ್ಲಾ ನಾನ್ ಮಾಡೋಳೇ....ಜಮೀನ್ದಾಗೆ ದುಡ್ದೋಳಿಗೆ ಅದೇನ್ ತ್ರಾಸ ಅಲ್ಲ ಬಿಡ್ರೀ....ಊರಾಗೆ ನನ್ ಮನೀಯಂವಾ ಒಂಟಿ ಭೂತ ಆಗೋದ್ನಲ್ರೀ....ನನ್ ಮ್ಯಾಲೆ ಜೀವ ಇಟ್ಕೊಂಡಿದಾನ್ರೀ....ಆದ್ರೂ ಹೇಳ್ಲೊಲ್ಲ....ಅವ್ನಾ ಅಲ್ಲಿ ಬಿಟ್ಟು ನಾ ಒಬ್ಬಾಕೀ ಇಲ್ಲಿ ಏನ್ ಸಾಯ್ಲಿ....? ಅಂವಾ ಅಲ್ಲಿ ಕಷ್ಟ ಪಡ್ತಾನ್ರೀ ಯಪ್ಪಾ....ಒಬ್ನೇ ಕೈ ಬಾಯಿ ಸುಟ್ಕಂಡು ಹೊತ್ತಾರೆ ಬಿಸಿಲ್ನಾಗಿ ಹೊಳ್ಳಾಡ್ತಾ ಮೈಮುರ್ದು ದುಡಿದ್ ತಂದ್ ಹಾಕುದ್ನಾ.... ನನ್ಮಗ ವೋಗಿ ಕಸ್ಕೊಂಡು ಬರ್ತಾನ್ರೀ....,ಈಗೊಂದೆರಡು ತಿಂಗ್ಳ ಹಿಂದಿ ನೋಡ್ರೀ...ಬಚ್ಚಲ್ದಾಗೆ ಚಕ್ಕರ್ ಬಂದು ಬಿದ್ಬಿಟ್ಟೆ ನೋಡ್ರೀ...,ಆವಾಗ್ನಿಂದಾ ಸೊಂಟಾ ನೋವು ಬಾಳ ಐತ್ರೀ....ಅದ್ರ ಮ್ಯಾಕೆ ನನ್ ಮೊಮ್ಮಗ ಎಳೀ ಬೊಮ್ಟೇ ನೋಡ್ರೀ....ಎತ್ತೋಕಾಗ್ನಿಲ್ಲಾ ಅಂದ್ರೂವೇ ಕೇಳ್ಕಂತಾಯಿಲ್ಲ....ಪಾಪ...ಅದಕ್ಕೇನು ಗೊತ್ತೈತ್ರೀ....ದೇವ್ರ ಕಂದಾ....ನಾನು ಅಂದ್ರೆ ಜೀವ ಬಿಡ್ತೈತಿ..., ನನ್ ಸೊಸಿ ಚಿನಾಲಿ....ಮಗ್ನ ತಲೆ ತಿರಗ್ಸವ್ಳೆ....,ದುಡೀತಿವ್ನಿ ಅಂತ ಇಟ್ಕೊಂಡವ್ರೆ ನನ್ನ....ಇಗೋಂದು ಹದ್ನೈದಿಪ್ಪತ್ತು ದಿನ್ದಿಂದಾ ಉಚ್ಚೆ ಹೊಯ್ಯಕ್ ಆಗಲ್ರೀ....ತೊಡೆ ಸಂದಿಯಾಗ್ ಏನೋ ಸಿಕ್ಕಾಕೊಂಡದೆ....,ಸೊಸಿಗ್ ತೋರಿಸ್ದೆ....ಅದೇನೋ ಗುಸಾಪಿಸಾಂತ ಗಂಡಂಗೇಳಿ ಇಲ್ಲಿಗ್ ತಂದ್ ಹಾಕವ್ರೇ....ಖರ್ಚಿನ  ಬಾಬ್ತು ಇರ್ಬೇಕ್ ನೋಡ್ರೀ....ನನ್ನ ಅಡಮಿಂಟ್ ಮಾಡಿ ಈಗ್ ಬರ್ತೀವಿ ಅಂತ ಹೋದೋರ್ ಹೋಗೇ ಬಿಟ್ರೂ ಸಾಯೇಬ್ರಾ....ಅಪ್ಪಂಗಾರಾ ಹೇಳೋ ಮಗ್ನೇ ಅಂದಿದ್ದಕ್ಕೆ ಅಷ್ಟ್ದೂರಾ ಕಾಲ್ ಮಾಡಾಕೆ ಮಬೈಲಲ್ಲಿ ದುಡ್ಡಿಲ್ಲಾ ಅಂದ್ಬಿಟ್ಟು ತಾರಮ್ಮಯ್ಯ ಆಡಿಸ್ಬಿಟ್ಟು ಹೋಗೇಬಿಟ್ಟ್ರೂ.....ಏಳೆಂಟು ಮಕ್ಳು ಸತ್ತು ಹುಟ್ಟಿದ್ರೂವೇ ಮಲೆಮಾದೇಶ್ವರ್ನ ಮೇಲೆ ನಂಬ್ಕೆ ಕಳ್ಕೊಂಡಿರ್ನಿಲ್ಲಾ ನಾನು...ಕೊನೇಗೂ ದೇವ್ರು ಕಣ್ತೆರೆದ್ಬುಟ್ಟ....ಅಂದ್ಕೋಂಡಿವ್ರೀ....ಇಂತ ಮಗಾ ಇದ್ರೂವೇ ಒಂದೇ ಸತ್ರುವೇ ಒಂದೇ...." ಎನ್ನತ್ತಾ ಗೋಳೋ ಎಂದು ಅತ್ತಳು.
ಶ್ರಾವಣ್ ಒಂದು ಕ್ಷಣ ದಿಙ್ಮೂಢನಾದನು. ಇಂತಹ ಮಕ್ಕಳೂ ಉಂಟೇ....??? ಮಗು ತೊಡೆಯ ಮೇಲೆ ಹೇಸಿಗೆ ಮಾಡಿತೆಂದು ತೊಡೆಯನ್ನೇ ಕೆತ್ತಿ ಬಿಸಾಡಿದಂತೆ ಎಂಬುದು ಹಳೆಯ ಗಾದೆ ಮಾತಾದರೆ ಅದನ್ನು ತಿದ್ದುಪಡಿ ಮಾಡಿ ಮಗುವಿನ ಅಂಡನ್ನೇ ಕೆತ್ತಿ ಬಿಸಾಡಿದ ಎನ್ನಬೇಕು...? ಅಮ್ಮನಿಗಾಗಿ ಜೀವ ಕೊಡುವ ಅಪ್ಪನಿದ್ರೂ ಆತನೊಡನೆ ಜೀವಿಸುವ ಸ್ವಾತಂತ್ರ್ಯವಿಲ್ಲ ಈಕೆಗೆ.....! ಹಾಗೆಂದು ಅಮ್ಮನ ಕಷ್ಟಕ್ಕೆ ಮಗನ ಸ್ಪಂದನೆಯಾದರೂ ಎಂತಹುದು? ಇನ್ನು ಈಕೆಯಿಂದ ತಮಗೆ ಲಾಭಕ್ಕಿಂತಲೂ ನಷ್ಟವೇ ಅಧಿಕ ಎಂದು ಲಕ್ಕಾಚಾರ ಹಾಕಿರಬೇಕು. ಅದಕ್ಕೇ ಮಗ ಎನಿಸಿಕೊಂಡವ ಈಕೆಯನ್ನು ಇಲ್ಲಿ ಬಿಟ್ಟು ಪರಾರಿಯಾದದ್ದು. ಏಳೆಂಟು ಮಕ್ಕಳನ್ನು ಹೆಡೆದು ವಿಫಲಳಾದದ್ದೂ ಅಲ್ಲದೆ ಹೊಲದಲ್ಲಿ ನಿರಂತರ ದುಡಿತ, ಕೆಮ್ಮು,ದಮ್ಮು.... ಎಲ್ಲವುಗಳನ್ನು ಸಹಿಸಿಯೂ ಒಂದು ಮಗುವಿಗಾಗಿ ಈಕೆ ಪಟ್ಟ ಪಾಡು...?ಕೊನೆಗೂ ಹುಟ್ಟಿದ್ದ ಗಂಡು ಮಗ....,ಕೊನೆಗಾಲಕ್ಕೆ ದಿಕ್ಕಾಗಬೇಕಾದವನು ಮಾಡಿದ್ದೇನು....? ಎಲ್ಲ ಕಷ್ಟಗಳಿಗೆ ಕಳಶವಿಟ್ಟಂತೆ ಈಗ ಈಕೆಗೆ ಗರ್ಭಕೋಶ ಜಾರಿದ್ದೂ ಅಲ್ಲದೆ ಸೋಂಕಿಗೂ ಒಳಗಾಗಿದೆ. ಶಸ್ತ್ರಚಿಕಿತ್ಸೆ ಆಗಲೇಬೇಕು, ರಕ್ತದೊತ್ತಡ,ಸಕ್ಕರೆ ಖಾಯಿಲೆಗಳೂ ಗಂಭೀರ ಅನ್ನುವಷ್ಟರ ಮಟ್ಟಕ್ಕೆ ಮುಟ್ಟಿದೆ. ಮೊದಲು ಅದನ್ನು ಹಿಡಿತಕ್ಕೆ ತರಬೇಕು, ಎಲ್ಲ ಸಮಸ್ಯೆಗಳಿಗೂ ಯಜಮಾನನಂತೆ ಬಂದು ಕೂತಿದೆ, ಮಾನಸಿಕ ಒತ್ತಡ.....
"ಡಾಕ್ಟ್ರೀಸಾಯೇಬ್ರಾ....ನನಗ್ಗೇನಾಗೈತ್ರೀ....ಒಂಚೂರು ನಮ್ಮನೆಯವ್ರ ಕರೆಸ್ರೀ....ನಿಮ್ ದಮ್ಮಯ್ಯಾ ಅಂತೀನೀ....ಇದನ್ನ ನಿಮ್ಕಾಲು ಅಂದ್ಕೊಂಡು ಹಿಡ್ಕಂಡಿದೀನೀ...."
ಎನ್ನುತ್ತಾ ಆಕೆ ಶ್ರಾವಣ್ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಕಣ್ಣೀರು ಹಾಕಿದಳು. ಎಚ್ಚೆತ್ತುಕೊಂಡ ಶ್ರಾವಣ್ ಎಲ್ಲಕ್ಕೂ ಮೊದಲು ತನ್ನ ಕರ್ತವ್ಯವನ್ನು ಜ್ಞಾಪಸಿಕೊಂಡ. (ವೈದ್ಯನಾದವ ಯಾವುದೇ ಕಾರಣಕ್ಕೂ ತನ್ನ ವೈಯಕ್ತಕ ಭಾವನೆಗಳನ್ನು ರೋಗಿಗಳೆದುರು ಹೊರಗೆಡವಬಾರದು. ಮುಖಭಾವದಲ್ಲೂ ಅದರ ಪ್ರದರ್ಶನ ಸಲ್ಲ).
ನಸುನಗುತ್ತಲೇ ಅಜ್ಜಿಯ ಕೈಗಳನ್ನು ಮತ್ತಷ್ಟು ಭದ್ರವಾಗಿ ಹಿಡಿದುಕೊಂಡು ಹೇಳಿದ,
"ಅಜ್ಜೀ, ನೀವಿಷ್ಟು ಗಾಬರಿ ಆಗೋವಂತಾದ್ದು ಏನೂ ಇಲ್ಲಾ...., ಇಲ್ಲಿ ನಾವೆಲ್ಲಾ ಇದ್ದೇವಲ್ಲ? ಹೆದರಬೇಡಿ. ಇಲ್ಲಿಗೆ ಬಂದ್ಮೇಲೆ ನಿಮ್ಮ ಖಾಯಿಲೆಗಳೆಲ್ಲ ವಾಸಿ ಆಯ್ತು ಅಂತಾನೇ ತಿಳ್ಕೊಳ್ಳಿ. ಅಷ್ಟಕ್ಕೂ ಅಂತಾ ದೊಡ್ಡ ಖಾಯಿಲೆ ಏನೂ ಬಂದಿಲ್ಲ ನಿಮ್ಗೆ, ನಿಮ್ಮ ಗರ್ಭಕೋಶ ಅದರ ಸ್ಥಾನದಿಂದ ಕೆಳಕ್ಕೆ ಜಾರಿ ಸ್ವಲ್ಪ ಹೊರಕ್ಕೆ ಬಂದಿದೆ.. ಅದನ್ನ ಇನ್ನೂ ಇಟ್ಕೊಂಡು ಸುಮ್ಮನೆ ನೋವು ತಿನ್ನೋದ್ರಲ್ಲಿ ಅರ್ಥ ಇಲ್ಲ. ಒಂದು ಚಿಕ್ಕ ಆಪರೇಷನ್ ಮಾಡಿ ಅದನ್ನ ತೆಗ್ದುಬಿಡೋಣ. ಆದರೆ ಅದಕ್ಕೂ ಮೊದಲು ನಿಮ್ಮ ಬಿ.ಪಿ. ಶುಗರ್ ಕಂಟ್ರೋಲಿಗೆ ಬರ್ಬೇಕು. ಈಗ ಅದಕ್ಕೆ ಚಿಕಿತ್ಸೆ ಶುರುಮಾಡೋಣ. ಆಮೇಲೆ ಆಪೆರೇಶನ್ ಬಗ್ಗೆ ಯೋಚಿಸೋಣ. ಸರಿಯಾ...? ಅಂದಹಾಗೆ ನಿಮ್ಮ ಯಜಮಾನ್ರ ಫೋನ್ ನಂಬರ್ ಇದೆಯಾ ನಿಮ್ಮತ್ರ? ನಾನು ಅವರೊಡನೆ ಮಾತ್ನಾಡ್ತೀನಿ, ಅವ್ರನ್ನ ಇಲ್ಲಿಗೆ ಬರ್ಲಿಕೆ ಹೇಳ್ತೇನೆ ಆಯಿತಾ?"
ಕೂಡಲೇ ಸ್ವಲ್ಪ ಗೆಲುವಾದ ಅಜ್ಜಿ ತನ್ನ ಸೀರೆಯ ಸೊಂಟದ ಮಡಿಕೆಯಿಂದ ಚಿಕ್ಕ ಚೀಟಿಯೊಂದನ್ನು ತೆಗೆದು ಶ್ರಾವಣ್ ಕೈಗಿತ್ತಳು.
"ಡಾಕ್ಟ್ರೀ ಸಾಯೇಬ್ರಾ....,ಸಿಟೀಗೆ ಹೊಂಟೋಗ್ತಿಯಾ...ದಿನ ದಿನಕ್ಕೆ ಫೋನು ಹಚ್ಚು ಅಂದಿದ್ದಾ ನನ್ ಮನಿಯಾಂವ....ಮಬೈಲ ಕೊಟ್ಟಿದ್ದಾ....ಮಗ್ನ ಮನೇಗ್ ಬಂದು ನಾಕೈದು ತಿಂಗ್ಳ ವಳಗಿ ಸೊಸಿ ಅದ್ನ ಇಸ್ಕೊಂಡ್ಯಾಳ್ರೀ....ಮುದುಕಿ ಮುಂಡೆ, ನಮ್ ವಿಷ್ಯಾ ಮುದುಕಂಗೆ ತುತ್ತೂರಿ ಮಾಡ್ತ್ಯಾ...ಅಂತ ಹಿಂಸಾ ಕೊಟ್ಟ್ಯಾಳ್ರೀ.....ಇದೊಂದು ಚೀಟಿನ ಹೆಂಗೋ ಜ್ವಾಪಾನ ಮಾಡಿದೀನ್ರೀ...." ಅಜ್ಜಿ ಮತ್ತೆ ಬಿಕ್ಕಳಿಸಿದಳು.
"ಅಜ್ಜೀ...., ಮರೆತುಬಿಡಿ ಅದನ್ನೆಲ್ಲ....,ನಮ್ಮನ್ನೆಲ್ಲ ನಿಮ್ಮ ಮಕ್ಕಳು ಅಂತಾನೇ ತಿಳ್ಕೊಳ್ಳಿ ಆಯಿತಾ? ಏನೇ ಸಮಸ್ಯೆ ಇದ್ರೂ ನಮ್ಮತ್ರ ಹೇಳಿ...ಆಂ?"
ಶ್ರಾವಣ್ ಒಂದೆರಡು ಸಲ ಪ್ರಯತ್ನ ಪಟ್ಟ ಮೇಲೆ ಅಜ್ಜಿಯ ಗಂಡ ಲೈನಿಗೆ ಬಂದ. ಅಜ್ಜನಿಗೆ ಗಾಬರಿಯಾಗದಂತೆ ವಿಷಯ ತಿಳಿಸಿದ. ವಿಳಾಸ ಹೇಳಿದ. ತನ್ನ ಹೆಂಡತಿಯ ಕುರಿತು ವಿಷಯ ತಿಳಿದುದೇ ಮೃಷ್ಟಾನ್ನ ಭೋಜನ ಸವಿದಂತಾಯ್ತು ಎಂಬಂತೆ ಮಾತನಾಡಿದ ಅಜ್ಜ ಮಂಗಳೂರಿನ ಬಗ್ಗೆ ತನಗೆ ಏನೇನೂ ಅರಿಯದು ಎಂದ. ಪಕ್ಕದ ಹಳ್ಳಿಯ ಶಾಲೆಯ ಜವಾನ ಮಂಗಳೂರು ಕಡೆಯವನು ಇದ್ದಾನೆ, ಅವನನ್ನು ಜೊತೆ ಮಾಡಿಕೊಂಡು ಹೇಗಾದರೂ ನಾಳೆಯೇ ಬರುತ್ತೇನೆ ಎನ್ನುತ್ತಾ ಅವನೂ ಅತ್ತುಬಿಟ್ಟ.
"ಅಜ್ಜೀ, ನಿಮ್ಮ ಮನೆಯವ್ರು ನಾಳೆಯೇ ಬರ್ತಾರೆ ಆಯಿತಾ? ಈಗ ಮೊದಲು ನಿಮ್ಮ ರಕ್ತ ಪರೀಕ್ಷೆ ಮಾಡ್ಬೇಕು, ಎಲ್ಲಿ ಕೈ ಸ್ವಲ್ಪ ಮುಂದೆ ಮಾಡಿ ನೋಡುವಾ...ಹಾಗೇ...,ಕಣ್ಣು ಮುಚ್ಚಿ....,ಮುಖ ಕಡೆ ಮಾಡಿ....,ಒಂಚೂರು ರಕ್ತ ತೆಗೀತೇನೆ....ಹಾ...ಮುಗಿದೇ ಹೋಯ್ತು... ಹತ್ತಿಯನ್ನ ಇಲ್ಲಿಟ್ಟು ಸ್ವಲ್ಪ ಒತ್ತಿ ಹಿಡೀರಿ ಆಯಿತಾ? ನಾನಿನ್ನು ಬರ್ಲಾ...? ನಾಳೆಯಿಂದ ನನ್ನ ಡ್ಯೂಟಿ ಬೇರೆ ಕಡೆ ಇದೆ. ಇಲ್ಲಿಗೆ ಬೇರೆ ಡಾಕ್ಟ್ರು ಬರ್ತಾರೆ, ಅವ್ರತ್ರ ನಿಮ್ಮ ಬಗ್ಗೆ ಹೇಳಿರ್ತೇನೆ ಆಯಿತಾ?"
"ಡಾಕಿಟ್ರೇ...,ನಿಮ್ಮ ಉಪ್ಕಾರದ ಋಣಾನ ಹೇಂಗ್ ತೀರಿಸ್ಲೀ ಸಾಯಿಬ್ರಾ....ದೇವ್ರಂಗೆ ಬಂದ್ರೀ ಬುದ್ಧೀ....,ನಿಮ್ ಹೆತ್ತಮ್ಮನ್ ಹೊಟ್ಟೆ ತಣ್ಣಗಿರ್ಲಪ್ಪಾ...."
ಶ್ರಾವಣ್ ಅಜ್ಜಿಯ ಗಂಡನ ನಂಬರನ್ನು ತನ್ನ ಫೋನಿನಲ್ಲಿ ಸೇವ್ ಮಾಡಿಟ್ಟುಕೊಂಡ. ಚೀಟಿಯನ್ನು ಹಿಂತಿರುಗಿಸುತ್ತಾ ಹೇಳಿದ.
"ಅಜ್ಜೀ, ಹೆಚ್ಚು ಮಾತ್ನಾಡಿ ಆಯಾಸ ಮಾಡಿಕೊಳ್ಳಬೇಡಿ. ಸಿಸ್ಟರ್ ಕೈಯ್ಯಲ್ಲಿ ಔಷಧಿ ಕೊಟ್ಟು ಕಳಿಸ್ತೇನೆ. ಅಷ್ಟರೊಳಗೆ ಊಟಕ್ಕೆ ಕರೀತಾರೆ. ನೋಡಿ, ನನ್ಜೊತೆ ಬನ್ನಿ..., ಹಾಲಲ್ಲಿ ಹೋಗಿ ಸಾಲಲ್ಲಿ ನಿಂತ್ಕೊಂಡು ಊಟ ಹಾಕಿಸ್ಕೊಳ್ಳಿ. ಇಲ್ಲಿ ಊಟ, ಕಾಫಿಗೆ ದುಡ್ಡೇನೂ ಕೋಡೋದು ಬೇಡ. ಊಟ ಮುಗಿಸಿ ಔಷಧಿ ಕುಡಿದು ಮಲಗಿ ಆಯಿತಾ...?" ಅಜ್ಜಿಯ ಬೆನ್ನು ತಟ್ಟಿ ಶ್ರಾವಣ್ ಮುಂದಿನ ರೋಗಿಯೆಡೆಗೆ ಗಮನ ಹರಿಸಿದ.
ಮಾರನೆಯ ದಿನದಿಂದ ಅವನು ಹೆರಿಗೆ ವಿಭಾಗಕ್ಕೆ ನಿಯುಕ್ತಿಗೊಂಡ. ಹದಿನೈದು ದಿನಗಳ ಅವಿಶ್ರಾಂತ ದುಡಿಮೆಯ ನಂತರದ ಹದಿನೈದು ದಿನಗಳ ಕಾಲ ಗರ್ಭಿಣಿ ಸ್ತ್ರೀಯರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ. ಅದೂ ಮುಗಿಯಿತು. ಅದು ಸರಕಾರೀ ಆಸ್ಪತ್ರೆಯಾಗಿತ್ತಲ್ಲ? ಮಿತಿಮೀರಿದ ರೋಗಿಗಳ ಒತ್ತಡ. ಡ್ಯೂಟಿಯಲ್ಲಿರುವ ವೈದ್ಯನಿಗೆ ತನ್ನ ವಿಭಾಗದ ಹೊರತಾದ ವಿಭಾಗದ ಬಗ್ಗೆ ಯೋಚಿಸಲೂ ಸಮಯ ಇರುವುದಿಲ್ಲ. ಶ್ರಾವಣ್ ಆಗೊಮ್ಮೆ ಈಗೊಮ್ಮೆ ಅಜ್ಜಿಯನ್ನು ನೆನಪಿಸಿಕೊಂಡರೂ ಕೆಲಸದ ಒತ್ತಡದಿಂದಾಗಿ ಅವಳ ಬಗ್ಗೆ ತಿಳಿಯುವುದಾಗಲೀ ಅವಳನ್ನು ಭೇಟಿ ಮಾಡುವುದಾಗಲೀ ಸಾಧ್ಯವಾಗಿರಲಿಲ್ಲ. ಇನ್ನು ಮುಂದಿನ ಹದಿನೈದು ದಿನಗಳ ಕಾಲ ಪೋಸ್ಟ್ ಆಪರೇಟಿವ್ ವಾರ್ಡಿನಲ್ಲಿ ಶ್ರಾವಣ್ ಕರ್ತವ್ಯ ನಿರ್ವಹಿಸಬೇಕಿತ್ತು. ದಿನ ಬೆಳಗ್ಗಿನ ರೌಂಡ್ಸ್. ಅಂದರೆ ಹಿರಿಯ ಸ್ನಾತಕೋತ್ತರ ವಿದ್ಯಾರ್ಥಿಗಳು, ವಿಭಾಗದ ಮುಖ್ಯಸ್ಥರು(ಪ್ರಾಧ್ಯಾಪಕರು) ವಾರ್ಡಿನಲ್ಲಿರುವ ರೋಗಿಗಳ ಮೇಲುಸ್ತುವಾರಿಗೆ ಬರುತ್ತಾರೆ. ಅಲ್ಲಿ ಕರ್ತವ್ಯದಲ್ಲಿರುವ ಹೌಸರ್ಜನುಗಳೂ ಅವರ ಜೊತೆ ಇರಬೇಕಾದುದು ಕಡ್ಡಾಯ. ಪ್ರಾಧ್ಯಾಪಕರು ರೋಗಿಗಳ ಖಾಯಿಲೆಯ ಚರಿತ್ರೆ, ಔಷಧಿಯ ವಿಧಾನ, ಗುಣಮುಖ ಹೊಂದುವ ರೀತಿ, ಅದಕ್ಕೆ ರೋಗಿಯ ದೇಹದ ಪ್ರತಿಕ್ರಿಯೆ ಏನು...ಇತ್ಯಾದಿಯಾಗಿ ಪ್ರಶ್ನಿಸುವಾಗ ಸ್ನಾತಕೋತ್ತರ ವಿದ್ಯಾರ್ಥಿಗಳು ಸಮರ್ಪಕವಾದ ಉತ್ತರ ಕೊಡಬೇಕು. ರೋಗಿಯ ಸ್ಥಿತಿ ತೃಪ್ತಿಕರವಾಗಿ ಇಲ್ಲದಿದ್ದರೆ ಪ್ರಾಧ್ಯಾಪಕರು ಚಿಕಿತ್ಸಾ ವಿಧಾನದಲ್ಲಿ ಬದಲಾವಣೆ ಸೂಚಿಸುತ್ತಾರೆ. ಅದರಂತೆ ಅವರು ಚಿಕಿತ್ಸೆ ನೀಡಬೇಕು. ಅವರಿಗೆ ಸಾಹಾಯಕರಾಗಿ ಇಂಟರ್ನ್ಶಿಪ್ ವಿದ್ಯಾರ್ಥಿ(ಹೌಸರ್ಜನ್)ಗಳು ರೋಗಿಗಳ ಉಸ್ತುವಾರಿ ಮಾಡಬೇಕು. ಹಾಗೆ ದಿನ ಶ್ರಾವಣ್ ಗುಂಪಿನಲ್ಲಿದ್ದ. ಅದು ಪೊಸ್ಟ್ ಆಪೆರೇಟಿವ್ ವಾರ್ಡ್ ತಾನೇ? ಒಂದು ತಿಂಗಳ ಸತತ ಚಿಕಿತ್ಸೆಯ ನಂತರ ಅಜ್ಜಿಯ ಖಾಯಿಲೆಗಳೆಲ್ಲವೂ ಹಿಡಿತಕ್ಕೆ ಬಂದು ನಿನ್ನೆಯಷ್ಟೇ ಶಸ್ತ್ರಚಿಕತ್ಸೆಯೂ ಯಶಸ್ವಿಯಾಗಿ ನಡೆದು ಆಕೆಯನ್ನು ಪೋಸ್ಟ್ ಆಪರೇಟಿವ್ ವಾರ್ಡಿನ ಬೆಡ್ ನಂ.31 ರಲ್ಲಿ ಮಲಗಿಸಿದ್ದರು. ರೋಗಿಗಳನ್ನು ತಪಾಸಣೆ ಮಾಡುತ್ತಾ ವೈದ್ಯರ ಗುಂಪು ಅಜ್ಜಿಯ ಬೆಡ್ಡಿನ ಪಕ್ಕಕ್ಕೆ ಬಂತು. ಗುಂಪಿನಲ್ಲಿ ಪ್ರೊಫೆಸರರ ಮಾತೇ ಅಂತಿಮ. ಹೌಸರ್ಜನುಗಳದ್ದು ಏನಿದ್ದರೂ ಮೌನ ವೀಕ್ಷಣೆ. ಅವರು ತಮ್ಮ ಲೋ ಪ್ರೊಫೈಲನ್ನು ಕಾಯ್ದುಕೊಳ್ಳಬೇಕಾದುದು ಮುಖ್ಯ. ಅಜ್ಜಿಯ ಬೆಡ್ಡಿನ ಪಕ್ಕದಲ್ಲಿ ಪ್ರೊಫೆಸರರು ನಿಂತು ಕೇಸ್  ಶೀಟನ್ನು ನೋಡಿದರು. ಅವರ ಸುತ್ತಲೂ ಕೋಟೆಯಂತೆ ಸ್ನಾತಕೋತ್ತರ ವಿದ್ಯಾರ್ಥಿಗಳು, ಅವರ ಹಿಂದುಗಡೆ ಅಥವಾ ಬದಿಗಳಲ್ಲಿ ಹೌಸರ್ಜನುಗಳು ನಿಂತರು. ಶಸ್ತ್ರಕ್ರಿಯೆಯ ನೋವು ಅಜ್ಜಿಯ ಮುಖದಲ್ಲಿ ಮಡುಗಟ್ಟಿ ನಿಂತಿದ್ದರೂ ಕಣ್ಣುಗಳಲ್ಲಿ ಗೆಲುವು ಇತ್ತು. ಇಷ್ಟು ದಿನವೂ ಗಂಡ ಪಕ್ಕದಲ್ಲೇ ಇದ್ದನಲ್ಲ?
"ಹೇಗಿದ್ದೀರಿ ಅಜ್ಜೀ?" ಪ್ರೊಫೆಸರರು ಕೇಳಿದರು.
ಅಜ್ಜಿಯ ಚುರುಕು ಕಣ್ಣುಗಳು ಏನನ್ನೋ ಕಂಡುಹಿಡಿದಂತೆ ಫಳಫಳ ಹೊಳೆದುವು. ಪ್ರೊಫೆಸರರ ಪ್ರಶ್ನೆಗೆ ಉತ್ತರಿಸುವ ಬದಲು ಮಲಗಿದಲ್ಲಿಂದಲೇ ತಲೆಯನ್ನು ಮುಂದಕ್ಕೆ ಚಾಚಿ ದೃಷ್ಟಿಯನ್ನು ಚೂಪಾಗಿಸಿ ಗುಂಪಿನ ಸೀಳಿನಿಂದ ಸ್ವಲ್ಪವೇ ಸ್ವಲ್ಪ ಕಾಣುತ್ತಿದ್ದ ಶ್ರಾವಣ್ ಕಡೆಗೆ ನೋಟ ಹರಿಸಿ ಸುತ್ತಮುತ್ತಲಿನ ಪರಿವೆಯೇ ಇಲ್ಲದಂತೆ ಗಟ್ಟಿ ಧ್ವನಿಯಲ್ಲಿ ಹೇಳಿದಳು,
"ಡಾಕ್ಟ್ರೀ ಸಾಯೇಬ್ರಾ...,ಇಷ್ಟ್ದಿನಾ ಎಲ್ಲಿ ಹೊಂಟೋಗಿದ್ರೀ ನೀವು....ಯಾಪ್ಪಾ ಎಷ್ಟು ನೆನಸ್ಕೊಂಡೆ ನಿನ್ನ....ಸಿಸ್ಟರಮ್ಮ ಅಂದ್ಲೂ...,ದೊಡ್ಡ ಡಾಕಿಟ್ರು ಇಲ್ಲಿ ಬರೋವಾಗ ನಮ್ಜತೆಯೋರು ಯಾರೂ ಒಳಗ ನಿಲ್ಲೋ ಹಂಗಿಲ್ಲ ಅಂತ...., ಅದಿಕ್ಕೇ ನನ್ ಮನೀಯಂವಾ ಹೊರಗಿದ್ದಾನೆ ಕಂಡ್ರೀ....ನಂಗೆ ಬಾಳು ಕೊಟ್ಟ ನಿಮ್ಮನ್ನ ಅವಂಗೆ ರವಷ್ಟು ತೋರಿಸ್ಬೇಕಾಗಿತ್ತು....ಏಟು ದಿವ್ಸದಿಂದ ನಿಮ್ಮನ್ನ ಕಾಯ್ತಿದ್ದೆ...ನಿಮ್ಮೆಸ್ರು ಗೊತ್ತಿಲ್ಲಾ....ನಿಮ್ಮನ್ನ ಹ್ಯಾಗೆ ಹುಡುಕ್ಲೀ ಗೊತ್ತಿಲ್ಲಾ....ಎಲ್ರೂ ಬಿಳಿಕೋಟಿನ ದೊಡ್ ಮನುಸ್ರೂ...., ಕೇಳೋಕೂ ಭಯ ನೋಡ್ರೀ....ಎಲ್ಲಿ ನಿಮ್ಮನ್ ನೋಡದೆ ಹೋಗಿ ಬಿಡ್ತೀನೋ ಅಂತ ಶ್ಯಾನೆ ಯೋಚನೆಯಾಗ್ಬಿಡ್ತು ಡಾಕಿಟ್ರೇ....,ಒಂದೇ ಒಂದು ಸಲಿ ನನ್ ಮನೀಯಂವ್ನಾ ಒಳಗಾ ಕರೀಲಾ ಡಾಕಿಟ್ರೇ...?"
ಅಜ್ಜಿಯ ಮಾತುಗಳಿಗೆ ಯಾರೂ ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಉತ್ತರಿಸಬೇಕಾಗಿದ್ದ ಶ್ರಾವಣ್ ಇರುಸುಮುರುಸಿಗೊಳಗಾಗಿ ಮೌನಕ್ಕೆ ಶರಣು ಹೊಡೆದಿದ್ದ.
ತನ್ನ ಜೊತೆಯಲ್ಲಿ ಹಿರಿಯ ವಿದ್ಯಾರ್ಥಿಗಳಿದ್ದಾರೆ. ಅದಕ್ಕಿಂತಲೂ ಮಿಗಿಲಾಗಿ ಪ್ರೊಫೆಸರರು ಸ್ವತಃ ರೋಗಿಯನ್ನು ವಿಚಾರಿಸುತ್ತಿದ್ದಾರೆ. ಅವರ ಮಾತುಗಳೆಡೆಗೆ ಗಮನವೀಯದೆ ಅಜ್ಜಿ ತನ್ನನ್ನು ಹೊಗಳಿ ಅಟ್ಟಕ್ಕೇರಿಸುತ್ತಿದ್ದಾಳಲ್ಲ? ಇವರೆಲ್ಲರೆದುರು ತಾನೆಷ್ಟರವನು? ಆದರೆ ತಾನೇನೋ ಮಹತ್ಕಾರ್ಯ ಮಾಡಿದಂತೆ ಒಂದೇ ಸಮನೆ ಬಡಬಡಿಸುತ್ತಿದ್ದಾಳಲ್ಲ ಈಕೆ...?" ಇಂತಹ ಯೋಚನೆಗಳ ಸುಳಿಯಲ್ಲೇ ಆತ ಕಳೆದುಹೋಗಿದ್ದ. ಆದರೆ ಅಜ್ಜಿ ಸುಲಭದಲ್ಲಿ ಬಿಟ್ಟುಕೊಡುವ ಬಾಬ್ತು ಅಲ್ಲ. ಎಷ್ಟೋ ದಿನಗಳಿಂದ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಶ್ರಾವಣ್ ಆಗಮನವನ್ನು ಎದುರು ನೋಡುತ್ತಿದ್ದಳು. ಆತ ಕರೆ ಮಾಡಿದ ಮಾರನೆಯ ದಿನವೇ ಅಜ್ಜ ಬಂದಿದ್ದ. ಅಜ್ಜಿಯಲ್ಲಿ ನೂರಾನೆ ಬಲವನ್ನು ತುಂಬಿದ್ದ. ಆತನ ಅಕ್ಕರೆಯ ಆರೈಕೆಯಿಂದಾಗಿ ಅಜ್ಜಿ ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸಿದ್ದಳು. ರಕ್ತದೊತ್ತಡ, ಸಕ್ಕರೆ ಖಾಯಿಲೆಗಳಿಂದ ಆಕೆ ಚೆನ್ನಾಗಿ ಚೇತರಿಸಿಕೊಂಡಾಗ ಅಜ್ಜ ಒಮ್ಮೆ ಊರಿಗೂ ಹೋಗಿ ಬಂದಿದ್ದ. ಅನಂತರವೇ ಅಜ್ಜಿಯ ಗರ್ಭಕೋಶದ ಆಪರೇಷನ್ ನಡೆದದ್ದು. ಇದೆಲ್ಲವನ್ನೂ ಅಜ್ಜಿ ಶ್ರಾವಣ್ ಬಳಿ ಹೇಳಿಕೊಳ್ಳಲೇಬೇಕಾಗಿತ್ತಲ್ಲ? ಆವತ್ತು ಅಷ್ಟು ಕುಕ್ಕುಲಾತಿಯಿಂದ ತನ್ನನ್ನು ವಿಚಾರಿಸಿಕೊಂಡವ ಇವತ್ತು ಮಾತೇ ಆಡುವುದಿಲ್ಲ ಎಂದರೇನರ್ಥ? ಅಜ್ಜಿ ಮಲಗಿದಲ್ಲಿಂದಲೇ ತಡಕಾಡಿ ತನ್ನ ತಲೆಯ ಬಳಿ ಇಟ್ಟುಕೊಂಡಿದ್ದ ಬಟ್ಟೆಯ ಗಂಟಿನಿಂದ ಹೊಟ್ಟೆ ಉಬ್ಬಿದಂತಿದ್ದ ಚೀಲವೊಂದನ್ನು ಹೊರಕ್ಕೆ ತೆಗೆದಳು.
"ಡಾಕ್ಟ್ರೀ ಸಾಯೆಬ್ರಾ...., ನಾವು ಬಡವ್ರು...ನಿಮ್ಗ ಕೊಡೋದ್ಕೆ ನಮ್ಮ ಬಳಿ ಏನೂ ಇಲ್ರಾ....ಆದ್ರೂವೇ ನಿಮ್ಮಂತ ದ್ಯಾವ್ರಿಗೆ ತಾರಮ್ಮಯ್ಯ ಆಡ್ಸಿ ಹ್ಯಾಂಗ್ರೀ ಹೋಗ್ಲೀ...ಇದ್ನ ಬ್ಯಾಡ ಅನ್ಬೇಡ್ರೀ ಯಾಪ್ಪಾ...ನಮ್ಮ ಹೊಲದಲ್ಲಿ ಬೆಳ್ದಿದ್ದು...ರಾಗಿ...ತಗೊಳಲ್ವೇನ್ರೀ ಸಾಯಿಬ್ರಾ....?" ಅಜ್ಜಿ ದೀನಳಾಗಿ ಕೇಳಿದಾಗ ಶ್ರಾವಣ್ ವಿಧಿಯಿಲ್ಲದೆ ಮುಂದಕ್ಕೆ ಬರಲೇಬೇಕಾಯ್ತು. ರೌಂಡ್ಸ್ ಮುಗಿದ ಮೇಲೆ ಸಾವಕಾಶದಲ್ಲಿ ಅಜ್ಜಿಯ ಬಳಿಗೆ ಬಂದು ಸುಖ ದುಃಖ ವಿಚಾರಿಸಿಕೊಳ್ಳೋಣ ಎಂದುಕೊಂಡಿದ್ದ. ಆದರೆ ಒಂದು ಸಂದರ್ಭ ತೀರಾ ಅನಿರೀಕ್ಷಿತವಾಗಿತ್ತು. ಶ್ರಾವಣ್ ಅತ್ತ ಧರಿ ಇತ್ತ ಪುಲಿ ಎನ್ನುವಂತಹ ಸಂದಿಗ್ಧತೆಯಲ್ಲಿರುವುದನ್ನು ಅರ್ಥಮಾಡಿಕೊಂಡಂತೆ ಪ್ರೊಫೆಸರರು ಆತನೆಡೆಗೆ  ನೋಡಿ ನಸುನಕ್ಕು ಹೆಬ್ಬೆಟ್ಟು ಮೇಲೆ ಮಾಡಿ `ಕ್ಯಾರಿ ಆನ್...' ಎಂದು ಮುಂದಿನ ರೋಗಿಯ ಕಡೆಗೆ ಗಮನವಿತ್ತರು.